Sunday, 17 November 2019

ದೇವರು ಕೊಟ್ಟ ಪ್ರೀತಿಯ ಆಸ್ತಿ ಈ ಚೆಲುವೆ....


ಆಕೆ ನನ್ನ ಜೊತೆ ಹುಟ್ಟಿದವಳಲ್ಲ.. ನನ್ನ ರಕ್ತ ಸಂಬಂಧಿಯೂ ಅಲ್ಲ.. ಆದರೆ ಆಕೆಯೆಂದರೆ ನನ್ನ ಹೃದಯದಲ್ಲಿದೆ ಪ್ರೀತಿಯ ಜಾಗ. ಆಕೆಯ ಮಾತುಗಳೆಂದರೆ ನನಗೇನೋ ವಿಶೇಷ ಸ್ಪೂರ್ತಿ ಅದೇಕೋ ಗೊತ್ತಿಲ್ಲ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತವಾದ ಒಬ್ಬಾಕೆ ನನ್ನ ಜೀವನದ ಮೇಲೆ ಇಷ್ಟೋದು ಪ್ರಭಾವ ಬೀರುತ್ತಾಳೇ ಎಂದು ಸ್ವತಃ ನಾನೇ ಯೋಚಿಸಿರಲಿಲ್ಲವೇನೋ… ಅಷ್ಟಕ್ಕೂ ಆಕೆ ಯಾರು, ಆಕೆಯೆಂದರೆ ನನಗೇಕೆ ಪ್ರೀತಿ ಎಲ್ಲವನ್ನೂ ತಿಳೀಯುವ ಕುತೂಹಲ ನಿಮಗಿದ್ರೆ ಈ ಪ್ರೀತಿಯ ಕಥೆಯನ್ನು ನೀವು ಓದಲೇ ಬೇಕು.
                        ಎಂದಿನಂತೆ ಅಂದು ನಾನು ನನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಕ್ರಾಲ್​ ಮಾಡುತ್ತಲಿದ್ದೆ, ಬಹಳ ದಿನಗಳಿಂದ ಕಾಡುತ್ತಿದ್ದ ಹೆಸರೊಂದು ಇಂದೂ ನನ್ನ ಕಣ್ಣಿಗೆ ಬಿದ್ದೇ ಬಿಡ್ತು ನೋಡಿ. ಆಗಿದ್ದಾಗಲಿ ಆಕೆಯ ಪೂರ್ವಾಪರ ವಿಚಾರಿಸಿಯೇ ಬಿಡೋಣ ಎಂದು ನಾನು ಆಕೆಯ ಗೆಳೆತನ ಬಯಸಲು ಆಕೆಗೆ ರಿಕ್ವೆಷ್ಟ್ ಕಳುಹಿಸಿಯೇ ಬಿಟ್ಟೆ… ಒಂದೈದು ನಿಮಿಷದೊಳಗೆ ನನ್ನ ಸಂಚಾರಿವಾಣಿಯ ಡಿಸ್ಪ್ಲೆ ನಲ್ಲಿ ಆಕೆ ನನ್ನ ರಿಕ್ವೆಸ್ಟ್​ ಸ್ವೀಕರಿಸಿದ್ದರ ಬಗ್ಗೆ ನೋಟಿಫಿಕೇಷನ್​ ಬಂದಾಗಿತ್ತು. ಖುಷಿಯಿದಲೇ ಆಕೆಗೊಂದು ಹಾಯ್ ಮಾಡಿಯೇ ಬಿಟ್ಟಿದ್ದೆ. ಕೊಂಚ ಸಮಯದ ಬಳಿಕ ಆಕೆಯಿಂದ ರಿಪ್ಲೈ ಬಂದಿತ್ತು ನೋಡಿ.. ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮೆಸೇಜ್ ಮೇಲೆ ಮೆಸೇಜ್ ಕಳುಹಿಸುತ್ತಲಿದ್ದೆ.


  ಹೀಗೆ ಪ್ರಾರಂಭವಾಯಿತು ನೋಡಿ ನಮ್ಮಿಬ್ಬರ ಸ್ನೇಹ… ಆಕೆಯಿರುವುದೂ ನಾನಿರುವುದೂ ಒಂದೇ ಊರಿನಲ್ಲಿ ಎಂದು ತಿಳಿಯುವುದೇ ತಡ ನನ್ನ ಖುಷಿ ದುಪ್ಪಟ್ಟಾಗಿತ್ತು, ಈ ನಡುವೆ ಆತ್ಮೀಯತೆ ಹೆಚ್ಚಾದಂತೆ ರಾಜಕೀಯ, ವಿದ್ಯಾರ್ಥಿ ಜೀವನ, ಕೆಲಸ ಇವೆಲ್ಲದರ ಕುರಿತಾಗಿ ಮಾತುಕಥೆ ನಡೆಯುತ್ತಲೇ ಇತ್ತು ಆದರೆ ಇನ್ಸ್ಟಾಗ್ರಾಂನಲ್ಲಿ ಅಲ್ಲ ಬದಲಾಗಿ ಫೋನ್ ನಂಬರ್​ ವಿನಿಮಯವಾಗಿ ನಮ್ಮ ಮಾತುಕತೆ ಸಾಗಿತ್ತು…..
 ಆಕೆಯ ಬಗ್ಗೆ ಹೇಳಲು ಬಹಳಷ್ಟಿದೆ.. ಚೋಟುದ್ದ ಇರುವ ಆಕೆಯ ಮೊಗದಲ್ಲಿ ಮಂದಹಾಸ ಎಂದೂ ಮಾಸಿದ್ದನ್ನು ನಾನು ಕಂಡಿಲ್ಲ...  ಆಕೆಯೆಂದರೆ ನನಗೇನೋ ಸ್ಫೂರ್ತಿ.. ಆಕೆಯ ಮಾತುಗಳೇ ನೊಂದ ಮನಸ್ಸಿಗೆ ನೆಮ್ಮದಿ ನೀಡುವ ಸ್ಥಾನ.  ಇಷ್ಟಿದ್ದರೂ ಸುಮಾರು 6 ತಿಂಗಳುಗಳ ಕಾಲ ನಾವು ಮೀಟ್ ಆಗಿಯೇ ಇಲ್ಲ..
ಒಂದು ದಿನ ನಾನು ಮಂಗಳೂರಿನಲ್ಲಿದೆ, ಆಕೆಯೂ ಕಾರ್ಯನಿಮಿತ್ತ ಮಂಗಳೂರಿಗೆ  ಆಗಮಿಸಿದ್ದಳು. ಇನ್ನು ಭೇಟಿಯಾಗದಿದ್ದರೆ ಹೇಗೆ ಎಂದು ಆಕೆಯನ್ನು ಪ್ರಶ್ನಿಸಿಯೇ ಬಿಟ್ಟೆ, ಅಂತೂ ಇಂತೂ ಮಂಗಳೂರಿನ ಸಿಟಿ ಸೆಂಟರ್​ನ ಮುಂಭಾಗದಲ್ಲಿ ಭೇಟಿಯಾಗಿ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಸಮಾಧಾನಪಟ್ಟಿದ್ದಾಯ್ತು..
 ಮತ್ತೆ ಕಾರ್ಯನಿಮಿತ್ತ ಬೆಂಗಳೂರು ಬಂದರೂ ಕೆಲಸದ ಒತ್ತಡದಿಂದ ಆಕೆಯನ್ನು ಭೇಟಿಯಾಗಲು ಆಗಿರಲಿಲ್ಲ.. ಆದ್ರೆ ನನ್ನ ಕೆಲಸಕ್ಕೆ  ರಾಜಿನಾಮೆಯಿತ್ತು, ಊರಿಗೆ ಹೋಗುವ ಮುನ್ನ ಆಕೆಯನ್ನು ಭೇಟಿಯಾಗುವ ಮನಸ್ಸಾಗಿತ್ತು. ಅದೃಷ್ಟವಶಾತ್​ ಆಕೆ ಮನೆಯಲ್ಲಿದ್ದಳು , ಆಕೆಯ ಮನೆಗೆ ಹೋಗಿದ್ದೆ.  ಮಾತನಾಡುತ್ತಾ ಸಮಯ ಕಳೆದ್ದದ್ದೇ ತಿಳಿಯಲಿಲ್ಲ. ಆಕೆಯ ತಂದೆ , ತಾಯಿ ಇತ್ತ ಪ್ರೀತಿ , ಆಕೆಯ ಮುಗ್ದ ಮನಸ್ಸಿನ ಮುಕ್ತ ಮಾತು, ಇವೆಲ್ಲವನ್ನು ನೋಡುತ್ತಾ ನನ್ನದೇ ಸ್ವಂತ ಕುಟುಂಬದ ಮಧ್ಯೆ ಇದ್ದೆನೋ ಎಂಬಂತೆ ಭಾಸವಾಗಿತ್ತು. ಆಕೆಯ ತಂದೆ- ತಾಯಿಯ ಪ್ರೀತಿ, ಆಕೆ ನನಗಿತ್ತ ಅಭಯ ಇವೆಲ್ಲವನ್ನೂ ನೋಡಿ ವಾಪಾಸ್​ ಬರುವಾಗ ನನ್ನ ಕಣ್ಣಾಲಿಗಳು ತೇವವಾಗಿದ್ದವು..
ಯಾವಾಗ್ಲೋ ನಡೆದ ವಿಷಯಕ್ಕೆ ಇಂದೇಕೆ ಬರೆಯುತ್ತಿದ್ದೇನೆ ಎಂದು ಯೋಚಿಸದಿರಿ, ಕಾರಣವಿದೆ. ನನ್ನ ಮನಸ್ಸು ವಿಹ್ವಲವಾಗಿದ್ದಾಗ, ಆಕೆ ಎಂದಿಗೂ ನನ್ನೊಂದಿಗಿದ್ದಳು. ಇಂದು ನನ್ನನ್ನು ಬೇಟಿಯಾಗಲು ಬಂದಾಗಲೂ ಆಕೆಯ ಮನೆಯ ಪ್ರೀತಿಯ ಸ್ವಾದದ ಚಪಾತಿಯನ್ನೂ ತಂದಿದ್ದಳು… ಜೀವನದ ಪಯಣದಲ್ಲಿ ಆಕೆ ಎಷ್ಟರ ವರೆಗೆ ನನ್ನೊಂದಿಗಿರುತ್ತಾಳೋ ತಿಳಿಯದು ಆದರೆ ಆಕೆ ಇರುವಷ್ಟು ಕಾಲ ನಾನು ಖುಷಿಯಿಂದಿರುವೆ ಎಂಬ ನಂಬಿಕೆ ನನಗಿದೆ. ನಮ್ಮಿಬ್ಬರ ಸೋದರತೆಯ ಬಂಧನ ಹೀಗೆ ಇರಬೇಕೆನ್ನುವ ಆಶಯ ನನ್ನದು.. ಹೇಗೆ ಇದ್ದರೂ ನೀ ನನ್ನೊಡನೆ ಇರುವೆಯೆಂಬ ನಂಬಿಕೆ ನನ್ನದು..
ಓಹ್ ಇಷ್ಟರ ಮಧ್ಯೆ ಆಕೆ ಯಾರೆಂದು ನಾನು ಹೇಳಿಯೇ ಇಲ್ಲವಲ್ಲ…
ಆಕೆ ಬೇರಾರೂ ಅಲ್ಲ … ನನಗಾಗೇ ದೇವರು ಕೊಟ್ಟ ತಂಗಿ  “ವಿದ್ಯಾ”

Wednesday, 13 November 2019

ಬೆಂಗಳೂರೆಂಬ ಹೈಟೆಕ್​ ಹಳ್ಳಿ



ಬೆಂಗಳೂರು : ಹೆಸರು ಕೇಳಿದೊಡನೆ ನಮ್ಮ ಕಲ್ಪನಾ ಲೋಕದಲ್ಲಿ ಅನೆಕಾನೇಕ ಚಿತ್ರವಿಚಿತ್ರ ವಿಚಾರಗಳು ಹರಿದಾಡಲು ಪ್ರಾರಂಭವಾಗುತ್ತದೆ,  ಸಾಲು ಸಾಲು ಗಗನಚುಂಬಿ ಕಟ್ಟಡಗಳು, ವಿಧಾನಸೌಧ , ಹೈಕೋರ್ಟ್​ , ಅದರ ಮುಂಭಾಗದಲ್ಲಿ ಇರುವ ಕಬ್ಬನ್​ ಪಾಕ್​ , ಲಾಲ್​ಭಾಗ್​ ಮುಂತಧ ಕಲ್ಪನೆಗಳು ಮನಃಪಲ್ಲಟದಲ್ಲಿ ಮೂಡಿ ಮರೆಯಾಗುತ್ತದೆ. ಆದ್ರೆಆ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಒಂದೆರಡು ದಿನ ಅಲೆದಾಡಿ ನೋಡಿ ನಾ ಕಲ್ಪಿಸಿಕೊಂಡ ಬೆಂಗಳೂರು ಇದೇನಾ ಎಂದು ನೀವು ಬೆರಳಿನ ಮೇಲೆ ಕೈ ಇಟ್ಟುಕೊಳ್ಳುವಿರೇನೋ…
   ಹೌದು ಬೆಂಗಳೂರು ಅದಂದು ಹೆಸರಲ್ಲ.. ಭಾರತದ ಐಟಿ ಹಬ್​ ಎಂದೇ ಕರೆಯಲ್ಪಡುವ ಕರ್ನಾಟಕದ ರಾಜಧಾನಿ, ಅನೇಕ ಸ್ಟಾರ್ಟಪ್ ಕಂಪೆನಿಗಳಿಗೆ ತಾಯಿಯಂತೆ ತನ್ನೊಡಲನ್ನು ನೀಡಿದ ಜಾಗವದು, ಸಾಧನೆ ಮಾಡಬೇಕು ಎಂದು ಆಗಮಿಸುವ ಕೆಲವರಿಗೆ ಸಿಹಿ ನನಿಡಿದ್ದರೆ ಇನ್ನು ಕೆಲವರಿಗೆ ಕಹಿಯುಣಿಸಿ ಪಾಠ ಕಲಿಸಿದ ದೇವತೆ.. ಆದ್ರೆ ಅದೊಂದು ದೊಡ್ಡ ಪಟ್ಟಣವಲ್ಲ, ಬದಲಾಗಿ ಅದೊಂದು ಹಾಳು ಕೊಂಪೆಯೆಂಬ ಹಳ್ಳಿ  ಎಂದರೆ ಸೂಕ್ತ ಎನ್ನುವುದು ನನ್ನ ಭಾವನೆ , ಯಾಕೆ ಅಂತೀರಾ?? ಬನ್ನಿ ಮಾತಾಡೋಣ..

  ಬೆಂಗಳೂರು ನಗರ ಎಲ್ಲಾ ರೀತಿಯ ಮೂಲಸೌಕರ್ಯ ಹೊಂದಿದ್ದರೂ ಯಾವುದೇ ಮೂಲಸೌಕರ್ಯವಿಲ್ಲದ ಹಳ್ಳಿಗೂ ಕಡೆ ಎಂದು ಹೇಳಬೇಕು, ಊರಿನ ನಡುವೆ ಹರಿಯುವನ ಕೊಳಚೆ ಕಾಲುವೆಗಳು, ಅಲ್ಲಲ್ಲಿ ಕೈಗಾಡಿಗಳಲ್ಲಿ ಸೊಪ್ಪು, ಪ್ಲಾಸ್ಟಿಕ್​, ಹಣ್ಣುಗಳನ್ನು ಮಾರುತ್ತಲಿರುವ ಜನರು, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಾರುವ ಕಸದ ರಾಶಿಗಳು, ಅಲ್ಲಲ್ಲಿ ಅಲೆದಾಡುತ್ತಾ ಒಳಿದಿರುವ ಅಲ್ಪಸ್ವಲ್ಪ ಹಸಿರನ್ನು ಸೇವಿಸುತ್ತಿರುವ ಅಲೆಮಾರಿ ದನಗಳು,. ಬೆಳಗ್ಗೆದ್ದು ರಾಕ್ಷಸರಂತೆ ಕೂದಲು ಹರವಿಕೊಂಡು ಕುಳಿತಿರುವ ಆಂಟಿ ಮಣೀಯರು, ಇವೆಲ್ಲವನ್ನು ನೋಡುತ್ತಿದ್ದರೆ ಮೂಲಸೌಕರ್ಯವಿಲ್ಲದೆ ಬಿದ್ದಿರುವ ಹಳ್ಳಿಗಳಂತೆ ಭಾಸವಾಗುತ್ತದೆ. ಅದೇಕೋ ಏನೋ ಬೆಂಗಳೂರಿನ ಕೆಲವ ಏರಿಯಾಗಳನ್ನು ನೋಡಿದರೆ ಇದ್ಯಾವ್ದಪ್ಪಾ ಹಾಳು ಕೊಂಪೆ ಎಂದು ನಿಮ್ಮ ಮೂಗಿನ ಮೇಲೆ ನೀವೇ ಕೈ ಇಟ್ಟುಕೊಳ್ಳುವಿರೇನೋ..
ಹೌದು ಬೆಂಗಳುರಿನ ಕೆಲವು ಜನರು ಅಲ್ಲ‘ಲ್ಲ. ಬಹುತೇಕ ಜನರು ಇಂದು ನೈತಿಕತೆ ಇಲ್ಲದೇ ಬದುಕುತ್ತಿದ್ದಾರೆ ಎಂದು ಭಾಸವಾಗುತ್ತದೆ. ಎಲ್ಲಿ ಕಸ ಬಿಸಾಡಬೇಡಿ ಎಂದು ಬರೆದಿರಲಾಗಿದೆಯೋ ಅಲ್ಲೇ ಕಸದ ರಾಶಿಯನ್ನು ಬಿಸುಟಿರುತ್ತಾರೆ, ಎಲ್ಲಿ ಮೂತ್ರ ಮಾಡಬೇಡಿ ಎಂದು ಬರೆದಿರಲಾಗುತ್ತದೋ ಅಲ್ಲೇ ಪ್ಯಾಂಟ್​ ಜಾರಿಸಿ, ಜಲಧಾರೆಯನ್ನು ಮಾಡುತ್ತಿರುತ್ತಾರೆ. ಇನ್ನು ಈ ಹೆಣ್ಮಕ್ಕಳಂತೂ ಬೆಳಗ್ಗೆ ಬೆಳಗ್ಗೆ ತಮ್ಮ ವಿರಾಟ್​ರೂಪವನ್ನು ತೋರಿಸುತ್ತಲೇ ಇರುತ್ತಾರಪ್ಪಾ..
ಒಟ್ಟಿನಲ್ಲಿ ಹೇಳಹೊರಟರೆ, ಬೇಕಾದ ಕೆಲಸವನ್ನು ಬಿಟ್ಟು ಬೇಡದ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಲಿರುತ್ತಾರೆ… ಕೆಲವೊಂದು ಬಾರಿ ಕೆಲೊಂದು ಪ್ರದೇಶವನ್ನು ನೋಡಿದಾಗಲಂತೂ  ಹಸಿರು ತುಂಬಿದ ನಮ್ಮ ಹಳ್ಳಿಯಲ್ಲಿ ಗಂಜಿಯುಂಡರೂ ಪರವಾಗಿಲ್ಲ ಹಳ್ಳಿಯೇ ಹಿತವೆಂದೆನಿಸುತ್ತದೆ... ಶುದ್ಧ ನೀರು ಶುದ್ಧ ಗಾಳಿ ಜೊತೆಯಲ್ಲಿ ಕಲುಷಿತವಿಲ್ಲದ ಆಹಾರವನ್ನು ನಾವು ಸೇವಿಸಬಹುದಲ್ಲಾ ಎಂದೆನಿಸುತ್ತದೆ.. ಜೊತೆಯಲ್ಲಿ  ಮಳೆಗಾಲದ ಮಳೆಯನ್ನು ಆಸ್ವಾದಿಸುತ್ತಾ, ಬೇಸಿಗೆಯ ಶೆಖೆಗೆ ಬೆಂದರೂ ತೋಟದ ನಡುವೆ ಹಾಯಾಗಿ ಆರಾಮವಾಗುತ್ತಾ ನಮ್ಮ ಜೀವಿತಾವಧಿಯನ್ನು ಆರಾಮವಾಗಿ ಕಳೆಯಬಹುದಲ್ಲಾ ಎಂಬುವುದೇ ಖುಷಿಯ ಸಂಗಗತಿ ಅಲ್ವಾ,,,,,
          ಈ ಲೇಖನದ ಉದ್ದೇಶ ಇಷ್ಟೇ ಇನ್ನಾದರೂ ನೀವು ಪೇಟೆಯ ವ್ಯಾಮೋಹ ಬಿಟ್ಟು , ಹಳ್ಳಿಯತ್ತ ಮುಖಮಾಡಿ, ನಮ್ಮ ಪಾರಂಪರಿಕ ಕೃಷಿ ಮತ್ತೆ ಉತ್ತುಂಗಕ್ಕೇರಲಿ ಖುಷಿಯಿಂದ ಬಾಳೋಣ ಅಷ್ಟೇ…

ಪ್ರೀತಿಯಿಂದ
ಅಕ್ಷಯ್​

Tuesday, 12 November 2019

ಒಂದು ಜೀನ್ಸ್ ಪ್ಯಾಂಟಿನ ಕಥೆ…

ಇದೊಂದು ಪಕ್ಕಾ ಹಳ್ಳಿ ಹುಡುಗನ ಕಥೆ, ಒಬ್ಬ ಹಳ್ಳಿ ಹುಡುಗ, ಅಂದ್ರೆ ಕೂಪ ಮಂಡೂಕ ಸಿಟಿ ಎಂಬ ಸಮುದ್ರದೊಳಗೆ ಧೂಮುಕಿ ಮುಂದೇನಾಗುತ್ತೆ ಎನ್ನೊ ಒಂದು ಹಾಸ್ಯಮಯ ಕಥೆ…

 ಆ ಹುಡುಗನ ಹೆಸರು ಬೇಡ ಬಿಡಿ.. ಯಾಕ್ ಸುಮ್ನೆ .. ಆದ್ರೆ ಪಕ್ಕಾ ಹಳ್ಳಿ ಹುಡುಗ ತನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನೆಲ್ಲಾ ಒಂದು ಪ್ರತಿಷ್ಟಿತ ಶಾಲೆಯಲ್ಲಿ ಮುಗಿಸಿದ್ದರೂ ಆತನಿಗೆ ಗುಣಾಕಾರ ಭಾಗಾಕಾರ ಲೆಕ್ಕ ಕಬ್ಬಿಣದ ಕಡಲೇಕಾಯಿಯೇ ಸರಿ.. ಅಷ್ಟೇ ಯಾಕೆ ಸಮಾಜ ಮತ್ತುಯ ಕನ್ನಡ ವಿಷಯ ಬಿಟ್ರೆ ಬೇರಾವ ವಿಷಯಗಳು ಅವನ ತಲೆಗೆ ಹತ್ತುತ್ತಿರಲಿಲ್ಲವಂತೆ…ಈ ಹಳ್ಳಿ ಗಮಾರನನ್ನು ಹೇಗಾದರೂ ಮಾಡಿ ಉದ್ಧಾರ ಮಾಡಿಯೇ ತೀರುವೆ ಎಂದು ಪಣತೊಟ್ಟ ಆತನ ಅತ್ತೆ ಆತನನ್ನು ಆ ಹಳ್ಳಿಯಿಂದ ಬಿಡಿಸಿ ಸುಮಾರು 75 ಕಿ.ಮಿ ದೂರದ ಮಂಗಳೂರಿಗೆ ಕರೆದುಕೊಂಡು ಬಂದರು, ಆದ್ರೆ ಈ ಪುಣ್ಯಾತ್ಮ ಅಟ್ಲೀಸ್ಟ್ ಅತ್ತೆಯ ಮರ್ಯಾದೆ ಉಳಿಸೋಕಾದ್ರೂ ಚೆನ್ನಾಗಿ ಕಲಿಬೇಕಲ್ವಾ??? ಊಹುಂ ಕಲೀಲೇ ಇಲ್ಲ.. ಆದ್ರೆ ಆ ಅತ್ತೆಗೆ ಒಬ್ಬ ಮಗನಿದ್ದ ಆ ಪುಣ್ಯಾತ ಆ ಸಮಯದಲ್ಲಿ ರಾಕ್ಷಸನಂತೆ ಕಂಡರೂ ಬಳಿಕ ಆತ ದೇವಮಾನವನಾದ..
ಅದೆಲ್ಲಾ ಇರ್ಲಿ ಈಗ ಜೀನ್ಸ್ ಪ್ಯಾಂಟಿನ ಕಥೆ ಹೇಳೊಕೆ ಹೊರಟ ಈ ಪುಣ್ಯಾತ್ಮ ಕಥೆನ ಬೇರೆ ಕಡೆ ಡೈವರ್ಟ್ ಮಾಡ್ತಾ ಇದಾನೆ ಅಂತ ಮನಸ್ಸಲ್ಲೇ ಬೈಕೋಬೇಡಿ, ವಿಷ್ಯ ಇರೋದೇ ಈ ಪೀಠಿಕೆಯಲ್ಲಿಉ ರೀ.. ಆತ ಹೊಸ ಶಾಲೆಎ ಏನೋ ಸೇರ್ಕೊಂಡಿದ್ದಾಯ್ತು, ಸದ್ಯಕ್ಕೆ ಆತನ ಉನಿಫಾರ್ಮ್ ಹೊಲಿಸ್ಕೊಂಡು ಕೋಲೆ ಬಸವನ ಥರ ಶಾಲೆಗೆ ಹೊಗ್ಬರ್ತಿದ್ದ.. ಹೋದ ಪುಟ್ಟ ಬಂದ ಪುಟ್ಟ ಎಂಬ ಗಾದೆಯ ಥರಹ ಶಾಲೆಗೆ ಹೋಗೊದು ಟೀಚರ್ ಹೇಳೋ ಪಾಠ ಕೇಳೋದು ವಾಪಾಸ್ ಮನೆಗೆ ಬರೋದು ಅಷ್ಟೇ ಅವನ ದಿನಚರಿ, ಹೀಗೆ ದಿನ ಸಾಗಿರಲು ಒಂದು ದಿನ ಅವನ ಸ್ಕೂಲ್ನಲ್ಲಿ ಮೊದಲ ಫಂಕ್ಷನ್ ಹೆಡ್ಮಿಸ್ಟ್ರೆಸ್ಸು ಬಂದು ನಾಳೆ ಎಲ್ರೂ ಕಲರ್ ಡ್ರೆಸ್ ಹಾಕೊಂಡು ಬರ್ಬೋದು ಅಂತ ಅನೌಂನ್ಸ್ ಮಾಡೇ ಬಿಟ್ರು.. ಅಯ್ಯಾ ನಮ್ ಹೀರೋಗೂ ಅಷ್ಟೇ ಬೇಕಿತ್ತೇನೋ, ಪುಣ್ಯಾತ್ಮ  ತನ್ನ ಫ್ರೆಂಡ್ಸ್ ಹತ್ರ ಬಡಾಯ ಕೊಚ್ಚಕೊಳೋಕೆ ಶುರು ಮಾಡ್ಕೊಂಡು ಬಿಟ್ಟಿದ್ದ, ನಾಳೆ ನಾನು ಸ್ಟೈಲ್ ಜೀನ್ಸ್ ಪ್ಯಾಂಟ್ ಹಾಕೋಂಡು ಬರ್ತೀನಿ ನೋಡ್ತಿರಿ ಅಂತ… ಅಯ್ಯೋ ದೇವಾ ಈ ಮಾತು ಹೇಳೋಕು ಮೊದ್ಲು ಅವನಿಗೆ ಜೀನ್ಸ್ ಪ್ಯಾಂಟ್ ಎಲ್ಲಿ ಸಿಕ್ತು ಅಂತ ಹೇಳೇ ಇಲ್ವಲ್ಲ..  ವಿಷ್ಯ ಇಷ್ಟೇ ಕಣ್ರೀ ಅವನ ಅಣ್ಣ  ಇದ್ದ ಅಂದಿದ್ನಲ್ಲ ಅದೇ ಆ ಹಳೇ ರಾಕ್ಷನ ಅವನ ಸೊಂಟಕ್ಕೆ ಚಿಕ್ಕದಾಗುವ ಪ್ಯಾಂಟೊಂದನ್ನು ಇವನಿಗೆ ಹಾಕೋಳೋಕೆ ಕೊಟ್ಟಿದ್ರು, ಆದ್ರೆ ಆ ಪ್ಯಾಂಟಿನ ಝಿಪ್ ಮಾತ್ರ ಹಾಳಾಗ್ ಹೋಗಿತ್ತು.  ಅದೇ ಪ್ಯಾಂಟ್ನ ಧೈರ್ಯದಲ್ಲಿ ಇವನು ಫ್ರೆಂಡ್ಸ್ ಮುಂದೆ ಬಡಾಯಿ ಕೊಚ್ಚಿಕೊಂಡು ಬಿಟ್ಟಿದ್ದ ಅಷ್ಟೇ.. ಆಲ್ ರೈಟ್ ಈಗ ಮುಂದಕ್ ಹೋಗಣ…
 ಅಂತೂ ಇಂತೂ ಫಂಕ್ಷನ್ ದಿನ ಬಂದೇ ಬಿಡ್ತು, ಇವನೂ ಕೂಡಾ ಅದೇ ಝಿಪ್ ಇಲ್ದಿರೋ ಪ್ಯಾಂಟ್ ಹಾಕೊಂಡು ಶಾಲೆಗೆ ನಾನೇ ಹೀರೋ ಅನ್ನೋ ರೇಂಜಿಗೆ ಎಂಟ್ರಿ ಕೊಟ್ಟಿದ್ದ, ಅಯ್ಯೋ ಶಿವನೇ ಈ ಹುಡುಗನ ಗ್ರಹಚಾರ ಕೆಟ್ಟೋಗಿತ್ತೋ ಏನೋ.. ಅವನ ಫ್ರೆಂಡ್ಸ್ ಬಂದು ಅವನ ಪ್ಯಾಂಟ್ ಝಿಪ್ ನೋಡಿ ಘೋಳ್ಳಂತ ನಕ್ಕು ಬಿಡೋದಾ???? ಛೇಛೇಛೇ … ಅಲ್ಲ ಮಾರಾಯಾ ಈ ಹರ್ದೋಗಿರೋ ಝಿಪ್ ಇಲ್ದೇ ಇರೋ ಜೀನ್ಸ್ ಪ್ಯಾಂಟ್ ನಂಬಿ ನೀನು ನಮ್ಮ ಮುಂದೆ ಬಿಲ್ಡಪ್ ಕೊಟ್ಯಾ ಅಂತ ಕೇಳಿದ್ದ.. ಅಷ್ಟೇ ಅಲ್ಲ ಅಕ್ಕ ಪಕ್ಕದಲ್ಲಿರೋ ಹುಡ್ಗೀರಿಗೂ ಅವನ ಈ ಜೀನ್ಸ್ ಪುರಾಣವನ್ನು ಬಿಚ್ಚಿಟ್ಟಿದ್ದ. ಶಿವನೇ ಶಂಭುಲಿಂಗ ಎಂದು ಪಾಪ ಆ ಹುಡುಗ ಇಡೀ ದಿನ ಮನಸಾರೆ ಅತ್ತು ಬಿಟ್ಟಿದ್ದ, ಇನ್ನು ಮುಂದೆ ಪ್ಯಾಂಟ್ ಹಾಕಿಲ್ಲ ಅಂದ್ರೂ ಪರ್ವಾಗಿಲ್ಲ, ಬಟ್ ಝಿಪ್ ಇಲ್ದೇ ಇರೋ ಪ್ಯಾಂಟ್ ಅಂತೂ ಹಾಕಲ್ಲ ಅಂತ ಪ್ರಮಾಣ ಮಾಡ್ಕೊಂಡ್ ಬಿಟ್ಟ ಪಾಪ,,,

ಹಾಸ್ಯ ಏನೇ ಇರ್ಲಿ ರೀ. ಆದ್ರೆ ಈ ಕಥೆಯ ಹಿಂದೆ ಎರಡು ನೀತಿ ಅಡಗಿದೆ ಕಣ್ರೀ..
ಒಂದು : ವಿಷಯದ ಬಗ್ಗೆ ಅರಿವಿಲ್ಲದೇ ನಾವು ಯಾವತ್ತೂ ಬಡೆಆಯಿ ಕೊಚ್ಕೋಬಾರ್ದು
ಎರಡು : ಏನೇ ಇರ್ಲಿ ಬಡಪಾಯಿ ಜೀವಿಗಳ ಬಗ್ಗೆ ನಾವು ಯಾವತ್ತೂ ಹಾಸ್ಯ ಮಾಡ್ಬಾರ್ದು…

ಅಂದ ಹಾಗೆ ಈ ಕಥೆ ಯ ಕಥಾನಾಯಕ ಯಾರು ಅಂತೀರಾ????????
ಹಿ ಇಸ್ ನನ್ ಅಥರ್ ಥೆನ್ …. ಅಕ್ಷಯ್ ಹೂ ಇಸ್ ಎ ಜರ್ನಲಿಸ್ಟ್ ನೌ

Thursday, 27 June 2019

ಭಜನಾಮೃತ

ಹಿಂದೊಂದು ಕಾಲವಿತ್ತು , ಅದು ಹೇಗೆ ಗೊತ್ತೆ , ಪ್ರಾತಃಕಾಲದಲ್ಲಿ ಸೂರ್ಯ ಉದಯಿಸುವುದಕ್ಕೂ ಮುನ್ನ ಎದ್ದ ಮನೆಯ ಹೆಂಗಳೆಯರೆಲ್ಲಾ ಸ್ನಾನಾದಿ ಕಾರ್ಯಗಳನ್ನೆಲ್ಲಾ ಮುಗಿಸಿ , ಮುಂಬಾಗಿಲ ನೆಲವನ್ನು ಸ್ವಾಸ್ಥ್ಯಗೊಳಿಸಿ, ರಂಗೋಲಿ ಹಾಕಿ ದೇವಗೃಹದಲ್ಲಿ ದೇವರ ಸೇವೆಗೈದು ಪ್ರತಿದಿನ ಪ್ರಾರಂಭಿಸುತ್ತಿದ್ದರು ಮನೆಯ ಪುರುಷರೆಲ್ಲಾ ಎದ್ದು ಪ್ರತಿದಿನ ಮನೆಯ ಕಾರ್ಯಗಳನ್ನೆಲ್ಲಾ ತಕ್ಕ ಮಟ್ಟಿಗೆ ಮುಗಿಸಿ, ಸ್ನಾನಾದಿಗಳನ್ನು ಮುಗಿಸಿ ದೇವತಾ ಕಾರ್ಯಕ್ಕೆ ಅಣಿಯಾಗುತ್ತಿದ್ದರು ಆಗ ಇಂದಿನಂತೆ ಮೊಬೈಲುಗಳೇನು ಇರುತ್ತಿರಲಿಲ್ಲ ಬೆಳಗ್ಗೆ ದೇವರನ್ನು ನೆನೆದ ಬಳಿಕವಷ್ಟೇ ದೈನಂದಿನ ಕಾರ್ಯಗಳು ಪ್ರಾರಂಭವಾಗುತ್ತಿದ್ದವು, ಕೂಡುಕುಟುಂಬಗಳಲ್ಲಿ ಇದ್ದಂತಹಾ ಹಿರಿಯ ಜೀವಗಳು ತನ್ನ ಮಕ್ಕಳಿಗೆ ತಿಳಿಸಿ ಕೊಟ್ಟಂತಹಾ ಸತ್ಕಾರ್ಯಗಳನ್ನು ತನ್ನ ಮೊಮ್ಮಕ್ಕಳಿಗೂ ತಿಳಿಸಿಕೊಡುತ್ತಿದ್ದರು , ಬೆಳಗ್ಗೆ ಎದ್ದ ಹಿರಿಯ ಜೀವಗಳು ಮನೆಯ ಮಕ್ಕಳೆಲ್ಲರಿಗೂ ಉತ್ತಮ ರೀತಿಯಲ್ಲಿ ಸತ್ಕಾರ್ಯಗಳನ್ನು ತಿಳಿಸುತ್ತಿದ್ದರು. ವಿಷ್ಣು ಸಹಸ್ರನಾಮ , ಲಲಿತಾ ಸಹಸ್ರನಾಮಗಳಂತಹಾ ದೇವತಾ ಸಹಸ್ರನಾಮಗಳು ಬಾಯಿಪಾಠವಾಗಿ ಬಿಟ್ಟಿರುತ್ತಿತ್ತು.

ಕಾಲ ಕಳೆಯಿತು ಕೂಡು ಕುಟುಂಬಗಳು ಒಡೆದ ಕುಟುಂಬಗಳಾದವು, ನಾವೆಲ್ಲರೂ ಸೂರ್ಯವಂಶಸ್ತರಾಗಿಬಿಟ್ಟೆವು ಅರ್ಥಾತ್ ಸೂರ್ಯ ಉದಯದ ಬಳಿಕ ನಮ್ಮ ದಿನ ಪ್ರಾರಂಭವಾಗತೊಡಗಿತು, ಮನೆಯಲ್ಲಿ ಗಂಟೆಯ ಸದ್ದಿಲ್ಲ ಏನೂ ಇಲ್ಲ.. ಹಿರಿಯ ಜೀವಗಳಿಗೆ ಬೆಲೆಯೂ ಇಲ್ಲದಂತಾಯಿತು.  ದಿನನಿತ್ಯ ಮನೆಮಂದಿಯೆಲ್ಲಾ ಕೂಡಿ ಮಾಡುತ್ತಿದ್ದ ಭಜನೆಗಳು ಶುಕ್ರವಾರಕ್ಕೆ ಸೀಮಿತವಾಯಿತು. ಆದರೆ ಒಂದತೂ ಸತ್ಯ ಈಗ ಕೆಲ ಬುದ್ಧಿಜೀವಿಗಳಿದ್ದಾರೆ ಕೇಳುತ್ತಾರೆ, ನಾವ್ಯಾಕೆ ಭಜನೆ ಮಾಡಬೇಕು?? ಭಜನೆ ಮಾಡುವುದರಿಂದ ಏನು ಪ್ರಯೋಜನ ಎಂದು ಆದರೆ ಪ್ರಯೋಜನ ಖಂಡಿತಾ ಇದೆ, ವೈಜ್ಞಾನಿಕವಾಗಿ ಭಜನೆಯ ಮಹತ್ವವನ್ನು ಉಲ್ಲೇಖಿಸಹೊರಟರೆ ಅದಕ್ಕೆ ಒಂದು ನೂರು ಪುಟಗಳು ಸಾಲಬಹುದೇನೋ...
ಭಜನೆಯ ಸಂದರ್ಭದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗುವುದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಬಂದು ನಾವೆಲ್ಲಾ ಒಗ್ಗೂಡಿ ಇರುತ್ತೇವೆ ಆದ್ದರಿಂದ ಸಮಾಜದಲ್ಲಿ ಒಡಕಿಗೆ ಆಸ್ಪದವಿರುವುದಿಲ್ಲ
ಭಜನೆಯಿಂದ ನಮ್ಮ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ,
¨ಪ್ರತಿದಿನ ಭಜನೆ ಮಾಡುವುದರಿಂದ ದೇವರ ನಾಮಜಪದೊಂದಿಗೆ ನಾವು ನಮ್ಮತನವನಗ್ನು ಉಳಿಸುವುದರೊಂದಿಗೆ , ಹೆಣ್ಣನ್ನು ಗೌರವವಾಗಿ ಕಾಣುತ್ತೇವೆ
ಆರೋಗ್ಯದ ಮೇಲೂ ಭಜನೆ ಉತ್ತಮ ವಾತಾವರಣ ಕಲ್ಪಿಸುತ್ತದೆ.
ಆದ್ದರಿಂದ ನಮ್ಮ ಸ್ವಾಸ್ಥ್ಯಕ್ಕಾಗಿ ನಮದಮ ಬದುಕಿಗಾಗಿ ನಾವು ಭಜಿಸೋಣ
ಸಮಾಜದ ಉನ್ನತಿಗೆ ಶ್ರಮಿಸೋಣ
ಜೈ ಹಿಂದ್
ಶ್ರೀ ರಾಮಕೃಷ್ಣಾರ್ಪಣಮಸ್ತು

ಇಂತಿ
ಅಕ್ಷಯ್

Tuesday, 25 June 2019

ಓಂ ನಮೋ ಮಾತಾ

ದೇವರು ಬರೆದ ಕಥೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ... ಹೌದು ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಖಂಡಿತವಾಗಿಯೂ ಸಾಧ್ಯವಿಲ್ಲ.. ತಾಯಿ ಎನ್ನುವುದು ಕೇವಲ ಒಂದು ಪದವಲ್ಲ ಅದೊಂದು ಉಸಿರು.. ಒಬ್ಬ ಮಗುವನ್ನು ತಾಯಿಗಿಂತ ಹೆಚ್ಚಾಗಿ ಯಾರೂ ಪ್ರೀತಿಸಲಾರರು.. ಮಾತೃ ಎಂಬ ಪದಕ್ಕೆ ಇರುವಂತಹಾ ಮಹತ್ವ ವರ್ಣಿಸಲಸಾಧ್ಯ.. ಭಾರತೀಯ ಪರಂಪರೆಯಲ್ಲಿ ತಾಯಿಗೆ ಮಹತ್ತರ ಸ್ಥಾನವಿದೆ.. ನಮ್ಮನ್ನು ಎಲ್ಲಾ ಹೊತ್ತಿರುವ ಭೂಮಿಯನ್ನು ತಾಯಿ ಎಂದು ಸಂಭೋದಿಸುತ್ತೇವೆ.. ವಿಧ್ಯೆಗೆ ಅಧಿಪತಿಯಾಗಿರುವ ಶಾರದೆ ಆಕೆಯನ್ನು ತಾಯಿ ಎಂದೇ ಸಂಭೋಧಿಸುತ್ತೇವೆ.. ತಾಯಿಯ ಎದೆಹಾಲು ಸೇವಿಸಿ ಬೆಳೆದ ನಾವುಗಳು ಬಳಿಕ ಸೇವಿಸುವುದೇ ಕಾಮಧೇನುವಿನ ಹಾಲನ್ನು ಅದಕ್ಕಾಗಿಯೇ ಆಕೆಗೂ ಗೋಮಾತೆ ಎಂಬ ಸ್ಥಾನವಿದೆ ನಾವೆಷ್ಟೇ ತಪ್ಪು ಮಾಡಿದರೂ ಎಷ್ಟೇ ನೋವು ನೀಡಿದರೂ ಅದನ್ನೆಲ್ಲಾ ಸಹಿಸಿಕೊಳ್ಳುವಳು ತಾಯಿ ಅದಕ್ಕಾಗಿಯೇ ಆಕೆಗೆ ಮಹತ್ತರ ಸ್ಥಾನ…

ತಾಯಿ ತಾನೇ ಮೊದಲ ಗುರು
ಪ್ರೀತಿ ಪಾಠ ಆಕೆಯಿಂದ ಶುರು
ಅಮ್ಮನ ಹೃದಯದಿ ನನ್ನ ವಿಹಾರ
ಅಮ್ಮನ ನೆನೆದರೆ ಕಷ್ಟಗಳೇ ಪರಿಹಾರ
ಈ ಮಾತು ಎಷ್ಟು ಸತ್ಯ .. ಒಂದು ಮಗು ತೊದಲುತ್ತಾ ಮದಲು ನುಡಿಯುವ ಮಾತೇ ಅಮ್ಮಾ.. ನೋವಿರಲು ಸಂತಸವಿರಲಿ ಮಗುವಿಗೆ ತಿಳಿದಿರುವ ಒಂದೇ ಮಾತು.. ಅಮ್ಮಾ.. ಅಂತೆಯೇ ಬಾಲ್ಯದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರವನ್ನು ಕಲಿಸುವಲ್ಲಿ ತಾಯಿ ಮಹತ್ತರ ಪಾತ್ರ ವಹಿಸುತ್ತಾಳೆ , ಮಗುವಿನ ಅಕ್ಷರಾಭ್ಯಾಸದಿಂದ ಹಿಡಿದು ಮಗುವಿನ ಸರ್ವತೋಮುಖ ಏಳಿಗೆಯ ವರೆಗೂ ತಾಯಿ ಶಮ ವಹಿಸುತ್ತಾಳೆ ಎಂದರೆ ತಪ್ಪಾಗಲಾರದು.
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ.. ಒಂಬತ್ತು ತಿಂಗಳು ಗರ್ಭದಲ್ಲಿ ತನ್ನ ಮಗುವನ್ನು ಹೊತ್ತು ತಿರುಗುವ ಮಾತೆ ಎಂದಿಗೂ ತನ್ನ ನೋವಿಗೆ ಬೇಸರಿಸುವವಳಲ್ಲ.. ಇನ್ನು ಮಗುವಿಗೆ ಜನ್ಮ ನೀಡುವಂತಹಾ ಸಂದರ್ಭದಲ್ಲಿ ದೇಹದಲ್ಲಿ ಇರುವ ಎಲ್ಲಾ ಮೂಳೆಗಳು ಮುರಿದು ಹೋಗುವಂತೆ ನೋವಾದರೂ ತಾಯಿ ಮಗುವಿನ ನಗುವಲ್ಲಿ ತನ್ನ ನೋವನ್ನೇಲ್ಲಾ ಮರೆಯುತ್ತಾಳೆ.. ಮಗುವಿನ ನಗುವಲ್ಲಿ ತನ್ನ ಸಂತಸವನ್ನು ಕಾಣುವವಳೇ ತಾಯಿ... ತನಗೆ ಎಷ್ಟೇ ನೋವಾದರೂ ತನಗೆ ಎಷ್ಟೇ ಬೇಸರವಾದರೂ ತನ್ನ ಕಂದಮ್ಮನಿಗೆ ಏನೂ ಆಗಬಾರದೆಂಬಂತೆ ತನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡು ತನ್ನ ಕಂದಮ್ಮನ್ನನ್ನು ಕಾಪಾಡುವವರು ತಾಯಿ ಮಾತ್ರ... ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಗುವಿನ ಸಾರ್ಥಕ್ಯಕ್ಕಾಗಿ ಜೀವ ಸವೆಸುತ್ತಾಳಲ್ಲಾ ಆ ತಾಯಿ ನಿಜವಾಗಿಯೂ ಪ್ರಶಂಸನಾರ್ಹಳೇ ಸರಿ..
ಅಮ್ಮ ನೀಡುವ ಕೈತುತ್ತು ಅಮೃತವಿದ್ದಂತೆ ಎಂಬ ಮಾತಿದೆ... ಅಮ್ಮನ ಅಡುಗೆ ರುಚಿಯನ್ನು ಯಾವುದೇ 5 ಸ್ಟಾರ್ ಹೋಟೆಲ್ ನೀಡಲಾರದು... ಪ್ರೀತಿಯಿಂದ ತಾಯಿ ನೀಡುವ ಒಂದು ತುತ್ತು ನಮಗೆ ಸ್ವರ್ಗ ಸಮಾನ, ತಾನು ಉಪವಾಸವಿದ್ದರೂ ಪರವಾಗಿಲ್ಲ ತನ್ನ ಮಕ್ಕಳ ಹೊಟ್ಟೆ ತಣ್ಣಗಿರಲಿ ಎಂದು ಭಾವಿಸಲು ತಾಯಿಗೆ ಮಾತ್ರ ಸಾಧ್ಯ.
ಆದರೆ ಇಂದು ಪಾಶ್ಚಿಮಾತ್ಯರ ಅನುಕರಣೆಯಿಂದ ನಾವು ತಾಯಿಯ ಮಹತ್ವವನ್ನೇ ಮರೆತಿದ್ದೇವೆ.. ತನಗೊಂದು ಮಾತು ಬೈದಳೆಂದು ತಾಯಿಯ ಬಳಿ ಮಾತು ಬಿಟ್ಟಂತವರು ನಮ್ಮ ನಡುವೆ ಎಷ್ಟೋ ಜನಗಳಿರಬಹುದು, ತಾನು ಕೇಳಿದ್ದನ್ನು ತಾಯಿ ತೆಗೆದುಕೊಡಲಿಲ್ಲ ಎಂದು ಅತ್ತೂ ಕರೆದು ತಾಯಿಯ ಮೇಲೆ ಕೋಪಿಸಿಕೊಂಡವರೂ ನಮ್ಮ ನಡುವೆ ಇರಬಹುದು. ತಾಯಿ ತನ್ನ ಮಾತನ್ನು ವಿರೋಧಿಸಿದಳೆಂದು ಆಕೆಯ ಮೇಲೆ ಕೈ ಮಾಡಿದ ಎಷ್ಟೋ ಮಂದಿ ನಮ್ಮ ನಡುವಿರಬಹುದು, ಆದರೆ ಇಂತಹಾ ಕೃತ್ಯಗಳನ್ನು ಮಾಡುವ ಮುಂಚೆ ಯೋಚಿಸಿ, ತಾಯಿ ನಿಮ್ಮನ್ನು ಬೆಳೆಸಲು ಪಟ್ಟ ಶ್ರಮವನ್ನು ಒಮ್ಮೆ ನೆನಪಿಸಿ, ನಿಮ್ಮನ್ನು ಸಾಕಿ ಸಲಹುವಲ್ಲಿ ಆಕೆ ಪಟ್ಟ ಶ್ರಮವನ್ನೊಮ್ಮೆ ನೆನಪಿಸಿ.. ಬಾಲ್ಯದಲ್ಲಿ ನೀವು ಎಲ್ಲೆಂದರಲ್ಲಿ ಅಲೆದಾಡುವಾಗ ತನ್ನ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಸಾಕಿದ್ದನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಜನ್ಮದ ಸಂದರ್ಭದಲ್ಲಿ ತಾಯಿ ಪಟ್ಟ ನೋವನ್ನೊಮ್ಮೆ ನೆನಪಿಸಿಕೊಳ್ಳಿ.. ಇಂತಹಾ ಪ್ರೀತಿಯನ್ನು ನೀಡಿದ ತಾಯಿಯನ್ನು ನೀವು ದೂಷಿಸುವುದಾದರೆ ದೂಷಿಸಿ.. ಹೇಳುವ ಮಾತು ಹೇಳಿಯಾಯಿತು ಇನ್ನು ತರ್ಕ ನಿಮಗೆ ಬಿಟ್ಟದ್ದು..
ಜೈ ಮಾತಾ..
ಕೊನೆಯದಾಗಿ ಮಾತಾ ಶ್ರೀ ಶಾರದಾದೇವಿ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಾ ಮಾತಿಗೆ ವಿರಾಮ ಇಡಲಿಚ್ಛಿಸುತ್ತೇನೆ
ಮಾತಾ ಮೇ ಶಾರಾದಾದೇವಿ ರಾಮಕೃಷ್ಣಪ್ರಭುಃ ಪಿತಾ
ಬಾಂಧವಾಃ ಸಕಲಾ ಭಕ್ತಾಃ ಸ್ವದೇಶೋ ಭುವನತ್ರಯಂ
ಜಗತ್ತಿಗೆ ಮಾತೆ ಶ್ರೀ ಶಾರದಾದೇವಿಯೆನಿಸಿದ್ದರೆ , ಪಿತಾಸ್ವರೂಪಿ ಶ್ರೀ ರಾಮಕೃಷ್ಣರು, ಭಕ್ತಜನರೆಲ್ಲರೂ ಮಕ್ಕಳಂತೆಂದಾದಾಗ , ತ್ರಿಲೋಕವೂ ಸ್ವದೇಶವೇ ಆಗಿದೆ..
ಶ್ರೀ ಕೃಷ್ಣಾರ್ಪಣಮಸ್ತು..


Monday, 17 June 2019

ಗಾಡಿನ ಎಲ್ಲೆಲ್ಲೋ ಬಿಡ್ಬೇಡ್ರೀ...



ಯಾರಿಗೊತ್ತು ಜೀವನ ಹೇಗಿರುತ್ತೆ ಅಂತ ಇವತ್ತು ನಮ್ದಾಗಿದ್ದು ನಾಳೆ ನಿಮ್ದಾಗ್ಬೋದು ಸ್ವಾಮಿ , ಸ್ವಲ್ಪ ಎಚ್ಚರ ಅಷ್ಟೇ. ಯಾಕೋ ಗೊತ್ತಿಲ್ಲ ಕಣ್ರಿ ಈ ಜೀವನ ಅನ್ನೋದು, ಪೆಟ್ರೋಲ್ ಕಾಲಿ ಆಗಿರೋ ಬೈಕ್ ತರ ಅನ್ಸೋಕೆ ಸ್ಟಾರ್ಟ್ ಆಗಿ ಬಿಟ್ಟಿದೆ, ಕಿಕ್ ಮೇಲೆ ಕಿಕ್ ಹೊಡುದ್ರೂ ಸ್ಟಾರ್ಟ್ ಅಂತೂ ಖಂಡಿತಾ ಆಗಲ್ಲ.. ಆದ್ರೂ ಈ ಬೈಕ್ ನ ಅಲ್ಲೇ ಬಿಡೋಕೂ ಆಗ್ದೇ, ಅತ್ಲಾಗೆ ತಳ್ಳೋಕೂ ಆಗ್ದೆ, ಬಿಡೋದಾ ತಳ್ಳೋದಾ ಅನ್ನೋ ಯೋಚ್ನೆ ಮಾಡಿ ಮುಗ್ಸೋದ್ರೊಳಗೆ, ಇರೋ ಚಾನ್ಸೂ ಮುಗ್ದು ಹೋಗಿರುತ್ತೆ ಅಷ್ಟೇ.. ಆದ್ರೂ ಸ್ವಾಮಿ ಬೈಕ್ ನ ಇರೋ ಕಡೆ ಪಾರ್ಕ್ ಮಾಡ್ಬೇಡಿ, ಸ್ವಲ್ಪ ದೂರ ತಳ್ಕೊಂಡು ಹೋಗಿ, ಯಾವ್ದಾದ್ರೂ ಪೆಟ್ರೋಲ್ ಬಂಕ್ ಸಿಕ್ರೂ ಸಿಗ್ಬೋದು.

        ನನ್ ಜೀವನ ಅನ್ನೋ ಗಾಡಿದೂ ಇದೇ ಅವಸ್ಥೆ, ಬೆಂಗಳೂರು ಅನ್ನೋ ಜಾಗಕ್ಕೆ ಬಂದು ನೆಟ್ಟಗೆ 2 ವರ್ಷ ಆಗ್ತಾ ಬಂತೂ, ಬಂದ ಒಂದೈದು ತಿಂಗಳು ನನ್ನ ಬೈಕ್ ಪೆಟ್ರೋಲು ಕಾಲಿ ಅಗ್ತಿರ್ಲಿಲ್ಲ, ಅತ್ತಾಗೆ ಮೈಲೇಜೂ ಚೆನ್ನಾಗಿತ್ತು.  ಯಾವಾಗ ಈ ಬರಹ ಅನ್ನೋ ಎಂಜಿನ್ ಆಯಿಲ್ ಸ್ವಲ್ಪ ಸ್ವಲ್ಪ ವೀಕಾಗೋಕೆ ಸ್ಟಾರ್ಟ್ ಆಯ್ತೋ ಅಷ್ಟೇ ನಮ್ ಕಥೆ, ನಮ್ ಗಾಡೀನೂ ಸ್ವಲ್ಪಾನೆ ಕೈ ಕೊಡೋಕೆ ಸ್ಟಾರ್ಟ್ ಆಯ್ತು, ಇತ್ತಾಗೆ ಹಂಗೋ ಹಿಂಗೋ ಏನೋ ಮಾಡಿ ಸ್ವಲ್ಪ ಸಮಯ ಗಾಡಿ ಓಡ್ಸಣ ಅಂತ ಅನ್ಕೋಡೆ ಯಾಕಂದ್ರೆ ವಿಧಿ ಇಲ್ಲ ನೋಡಿ, ಗಾಡಿ ಓಡಿದ್ರೇನೆ ಗಾಡಿಗೆ ಒಂದು ಗತ್ತಿರುತ್ತೆ, ನಿಂತಲ್ಲೇ ನಿಂತಿದ್ರೇ ಧೂಳು ಹಿಡಿಯುತ್ತೆ ಅಷ್ಟೇ.. ಈ ಸಂಬಂಧಿಕರು ಅನ್ನೋ ಧೂಳು ಗಾಡಿನ ಹಾಳು ಮಾಡೋಕು ಹೇಸಲ್ಲ ಕಣ್ರೀ… ಏನಾದ್ರೂ ನಮದು ಗಾಡಿನ ಒಂದು ತಿಂಗ್ಳು ನಿಲ್ಸಿದ್ವಾ ಮುಗೀತು ಕಥೆ, ಅವರ ಬಾಯಲ್ಲಿ ಮಾತು ಶುರು “ ಅಲ್ಲ ಅಕ್ಷಯ್ ಏನೋ ಕಿತ್ತು ಗುಡ್ಡೆ ಹಾಕ್ತೀನಿ ಅಂತ ಬೆಂಗ್ಳೂರಿಗೆ ಹೋದ್ನಂತೆ ಆದರೆ ಕೆಲ್ಸ ಬಿಟ್ನಂತೆ ಅಂತ” ಅಲ್ಲಿಗೆ ಕತೆ ಮುಗಿತು, ಒಬ್ಬನ ಕಡೆಯಿಂದ ಇನ್ನೊಬ್ಬನ ಕಡೆ ಹೋಗೋವಾಗ ಈ ವಾರ್ತೆಗೆ ಇನ್ನೊಂದು ವಾರ್ತೆ ಸೇರಿ ನಮ್ ಜೀವನ ಹಾಳ್ ಮಾಡೋ ಮಟ್ಟಕ್ಕೆ ಬಂದಿರುತ್ತೆ ಅಷ್ಟೇ.. ಈ ಒಂದೇ ಕಾರಣಕ್ಕೆ ಇಷ್ಟ ಇಲ್ಲ ಅಂದರೂ ನಮ್ ಗಾಡೀನ ಇನ್ನು ನಿಲ್ಲಿಸ್ದೆ ಮೈಲೇಜ್ ಕಡ್ಮೆ ಆದ್ರೂನೂ ಅದೇ ಗಾಡೀನ ಓಡಿಸ್ತಾ ಇದ್ದೀನಿ ಅಷ್ಟೇ.. ಆದ್ರೂ ಹಾಳಾಗಿರೋ ಗಾಡಿನಾ ಎಷ್ಟು ಅಂತ ಓಡುಸ್ತೀರಾ?? ಅದಿಕ್ಕೂ ಲಿಮಿಟ್ ಅಂತ ಇರುತ್ತಲ್ವ? ಹಾಗೆ ನನ್ ಗಾಡಿ ಲಿಮಿಟ್ ಮುಗಿತಾ ಬಂತೂ ಆಯುಷ್ಯವೆಂಬ ವಾಹಿನಿಯಲ್ಲಿ ನನ್ ಕಥೆ ಮುಗಿತಾ  ಬಂತು, ನನ್ ಪೆಟ್ರೋಲ್ ಮುಗ್ದು ಆಗ್ಲೆ ಒಂದೈದು ತಿಂಗಳಾಗ್ತಾ ಬಂತು ಆದ್ರೂ ಹಂಗೋ ಹಿಂಗೋ ಗಾಡಿ ತಳ್ಕೊಂಡು ಹೋಗ್ತಾ ಇದ್ದೆ ಅಂತ ಅನ್ನಿಸ್ತು, ಫೈನಲಿ ಮೊನ್ನೆ 6ನೇ ತಾರೀಖು ಅದೇನಾಯ್ತೋ ಗೊತ್ತಿಲ್ಲ, ಗಾಡಿ ಸರ್ರಕ್ ಅಂತ ಬಂದ್ ಬಿದ್ಬಿಡ್ತಪ್ಪಾ.. ಅಲ್ಲಿಗೆ ನಮ್ ಕಥೆ ಮುಗಿತು, ಗಾಡಿನ ಸ್ವಲ್ಪ ದಿನ ಅಂದ್ರೆ ಒಂದು ತಿಂಗ್ಳು ರಿಪೇರಿ ಕೊಡ್ಬೇಕು ಅಂತ ಅನ್ನುಸ್ತು ಹಂಗೆ ಒಂದು ಸೈಡಲ್ಲಿ ನಮ್ಮ ಆಫಿಸಿನ ಹೆಚ್. ಆರ್. ಅನ್ನೋ ಗ್ಯಾರೇಜ್ ಗೆ ರಾಜಿನಾಮೆ ಪತ್ರ ಕೊಟ್ಬಿಟ್ಟು ಬಂದ್ಬಿಟ್ಟೆ, ಈ ಗಾಡಿ ಯಾವಾಗ ರಿಪೇರಿಯಾಗುತ್ತೋ ಗೊತ್ತಿಲ್ಲ, ಅದರ ಬಗ್ಗೆ ಸ್ವಲ್ಪನೂ ಯೋಚ್ನೆ ಇಲ್ಲ, ನೋಡಣ ಏನಾಗುತ್ತೆ ಅಂತ... ಇನ್ನೊಂದು ಮಾತು ಈ ಗಾಡಿನ ನಾನಂತೂ ಬಿಡಲ್ಲ, ಇನ್ನೊಂದು ತಿಂಗಳು ಬಿಟ್ಟು ಗಾಡಿ ಹಾಳಾದ್ರೆ ತಳ್ಕೊಂಡು ಹೋಗ್ತೀನಿ, ರಿಪೇರಿ ಆದ್ರೆ ಪೆಟ್ರೋಲ್ ಹಾಕೊಂಡು ಓಡುಸ್ತೀನಿ ಅಷ್ಟೇ...

Tuesday, 11 June 2019

ಇಷ್ಟೇ ರೀ ನಮ್ ಕಥೆ..

ಮನಸು ವಿಹ್ವಲವಾಗಿತ್ತು, ಯೋಚನಾಲಹರಿಯಿಲ್ಲದೆ ಮನಸ್ಸು ಉಪ್ಪು ಹುಳಿ ಖಾರವಿಲ್ಲದ ಚಿತ್ರಾನ್ನದಂತಾಗಿತ್ತು, ಆಫೀಸಿನ ನಾಲ್ಕು ಗೋಡೆಯೊಳಗೆ ಕುಳಿತು ಬೇಸರವಾದಂತಾಗಿ , ಇನ್ನೇನು ನನ್ನ ಕೊನೇಯ ಕೆಲಸವನ್ನೆಲ್ಲಾ ಮುಗಿಸಿ ಹೊರಡೋಣವೆಂದಿದ್ದೆ.. ಆಗಲೇ ಕಂಡಿದ್ದು ಆ ಪುಣ್ಯಾತ್ಮನ ಮುಖವನ್ನು.. ಸ್ವಲ್ಪ ಹೊತ್ತಿನಲ್ಲೇ ಬರುವೆನೆಂದು ಆತನೇನೋ ಹೊರಟು ಹೋದ ಆದರೆ, ನಮ್ಮ ಪಾಡು ಕೇಳುವವರಾರು? ಈ ಚಿತ್ರಾನ್ನವನ್ನು ಅತ್ತ ಎಸೆಯಲೂ ಆಗದೇ ತಿನ್ನಲೂ ಆಗದೆ, ಸುಮ್ಮನೆ ಕುಳಿತಿರಲು, ಮನದ ಚಿಂತೆಗಳು ಪಲ್ಲಟವಾಗಬಹುದೇನೋ ಎಂದುಕೊಂಡು , ಚಹಾ ಸೇವನೆಗಾಗಿ ಪಕ್ಕದಲ್ಲಿನ ಅಂಗಡಿಯತ್ತ ಮನವಿಲ್ಲದ ತನುವು ಹೊರಟು ಹೋಯಿತು.
        ಕೈಯಲ್ಲಿ ಚಹಾದ ಗ್ಲಾಸನ್ನು ಹಿಡಿದಿದ್ದರೆ, ಮನಸ್ಸು ಪಾಕಿಸ್ಥಾನವೋ ಅಮೇರಿಕಾವೋ ಎಲ್ಲಾ ಕಡೆ ಸುತ್ತಾಡುತ್ತಲಿತ್ತು, ಥತ್ತೇರಿಕೆ, ಏಕೆ ಹೀಗಾಗುತ್ತಿದೆ ಎಂದು ಯೋಚಿಸುವುದಕ್ಕೂ ವ್ಯವಧಾನವಿಲ್ಲ, ತನ್ನಿಂದ ತಾನೆ ಮನಸ್ಸು ವಿಹ್ವಲವಾದಂತೆ ಭಾಸ. ಕಣ್ಣೋಟವಂತೂ ಮುಂದಿರುವ ಅಯ್ಯಂಗಾರ್ ಬೇಕರಿಯ ಕಡೆಗಿದ್ದರೆ, ಮನಸ್ಸು ಮಾತ್ರ ಎಲ್ಲೆಲ್ಲೋ ಓಡುತ್ತಿತ್ತು. ಕೈ ನನಗರಿವಿಲ್ಲದೇ ಇನ್ನೊಂದು ಗ್ಲಾಸ್ ಚಹಾ ಸೇವಿಸಬೇಕೆಂಬ ಆಜ್ಞೆ ನೀಡಿದಂತೆ ಭಾಸವಾಗಿ, ಇನ್ನೊಂದು ಗ್ಲಾಸ್  ಚಹಾ ಸೇವಿಸಿದ್ದೂ ಆಯಿತು. ಕನಸುಗಳ ಬೆನ್ನತ್ತಿ ಹೋಗಬೇಕಾದ ಮನಸ್ಸು ಭಾವನೆಗಳ ಬೆನ್ನತ್ತಿ ಹೋಗುತ್ತಿದೆ ಏನೋ ಎಂದು ಭಾಸವಾದಂತಿದೆ.

  ಅತ್ತ ಧರೆ ಇತ್ತ ಪುಲಿ ಎಂಬಂತಿದೆ ಬದುಕು, ಮುಂದೆ ಹೋದರೆ ಬಾಳುವೆನೋ ಬೀಳುವೆನೋ ಎಂಬ ಯೋಚನೆ ಒಂದೆಡೆಯಾದರೆ ಇಲ್ಲೇ ನಿಂತರೆ ನಿಂತ ನೀರಾಗಿಬಿಡುವೆನೋ ಎಂಬ ಭಾಸ, ಮನ ಕೇಳದು ನಿಂತ ನೀರಾಗಲೂ ಆಗದು ಅತ್ತ ಪುಲಿಯ ಬಾಯಿಗೆ ಬೀಳಲಾಗದು ಏನಾಗುವುದೋ ಬಲ್ಲವರಾರು? ದೇವನೊಬ್ಬನಿದ್ದಾನೆ, ದೇವದೂತನೂ ಇದ್ದಾನೆ, ಆತ ದಾರಿ ತೋರಿಸಬಹುದೇನೋ ಏನಾಗುತ್ತೋ ಕಾದು ನೋಡಬೇಕಾಗಿದೆ ಅಷ್ಟೇ..
        ಜೀವನವೆಂಬುವುದು ನಿಂತ ನೀರಾಗಬಾರದಷ್ಟೇ..
        ಭೋರ್ಗರೆಯುವ ಸಮುದ್ರವಾಗಿ, ಅತ್ತ ಉಪ್ಪಿಗೆ ಉಪ್ಪಾಗೆ
        ಇತ್ತ ಮಳೆಹನಿಯ ತರುವ ಮೋಡವಾಗಿ,
        ನಾಲ್ಕಾರು ಜನರಿಗೆ ಸಹಾಯವಾದರೆ ಸಾಕಷ್ಟೆ.


                                                          ಇಂತಿ ನಿಮ್ಮವ
                                                                   ಅಕ್ಷಯ್
 

                                           



Thursday, 6 June 2019

ಮರೆಯದ ಮೌನದ ಮಾತು..

ಕೈ ನಡುಗುತ್ತಲಿದೆ.. ಮನ ಬೇಡ ಬೇಡವೆಂದರೂ ಒಂದು ವರುಷದ  ಹಿಂದಿನ ನೆನಪಿನಂಗಳದತ್ತ ಜಾರುತ್ತಲಿದೆ..  ಬಹುಷಃ ಈ ಲೇಖನ ಮುಗಿಯುವ ಹೊತ್ತಿಗೆ ಕಣ್ಣಾಲಿಗಳು ತೇವಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.. ಭವನೆಗಳಿಗಿದು ಜಾಗವಲ್ಲ, ಭಾವನಾತ್ಮಕ ಲೋಕಕ್ಕೂ ಇಲ್ಲಿಗೂ ಸಂಬಂಧವೇ ಇಲ್ಲವೇನೋ ಎಂದೆನಿಸುವ ಕಾಲ ಸನ್ನಿಹಿತವಾಗಿದೆ. ಹೌದು ಈಜು ಬರದಿದ್ದರೂ ಕೆರೆಯೊಳಗೆ ಧುಮುಕಿದ ಮೇಲೆ ಈಜು ಕಲಿಯಲೇ ಬೇಕು ತಾನೆ..?
            ಒಂದುವರೆ ವರುಷದ ಹಿಂದಿನ ಮಾತದು. ಕಿಸೆಯಲ್ಲಿತ್ತು 6 ಸಾವಿರ ರುಪಾಯಿಗಳು, ಅದೂ ಕೂಡಾ ನನ್ನ ಸ್ವಂತದ್ದಲ್ಲ.. ಅಪ್ಪನ ದುಡಿಮೆಯ ಕಾಸು. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ತೊಟ್ಟು ಬಂದ ನನಗೆ ದಾರಿದೀಪದಂತೆ ಭಾಸವಾದುದ್ದು, ಅದೇ ಆಯುಷ್ ಟಿವಿ.

        ಗ್ರಾಫಿಕ್ಸ್ ಏನೆಂದು ಗೊತ್ತಿಲ್ಲ.. ಎಡಿಟಿಂಗ್ ಅಂದರೆ ಏನೆಂದು ಗೊತ್ತಿಲ್ಲ ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರವೇ ಹೊಸದು.. ಇರಲು ಸರಿಯಾದ ಸ್ಥಳವಿಲ್ಲ, ಎಲ್ಲಿರುವುದು ಎಂದು ಯೋಚಿಸುತ್ತಿರುವಾಗಲೇ ದೇವಲೋಕದ ದೇವದೂತನಾದವನು ಮೌಲಾನ, ಸುಮಾರು 2 ಗಂಟೆಯ ದಾರಿಯಾದರೂ ತತ್ಕಾಲಕ್ಕೆ ಅಲ್ಲಿಂದ ಆಫೀಸಿಗೆ ಬರುವುದು ಎಂದು ತೀರ್ಮಾನಿಸಿಬಿಟ್ಟೆ.
    ಬೆಳಗ್ಗೆ 05:30ಕ್ಕೆ ಇಲೆಕ್ಟ್ರಾನಿಕ್ ಸಿಟಿಯಿಂದ ಹೊರಟರೆ ಆಫಿಸ್ ತಲುಪುವುದು 09:00 ಗಂಟೆಗೆ ಆದರೂ ಹಾಗೋ ಹೀಗೋ ಎಂಬಂತೆ ಆಫೀಸು ಸೇರಿ ಕೆಲಸ ಮಾಡುತ್ತಿದ್ದವನು ನಾನು, ನನಗೋ ಕಂಪ್ಯೂಟರಿನ ಮುಂದೆ ಕುಳಿತು ನುಡಿಯಲ್ಲಿ ಕ್ಲಿಕ್ಕಿಸುವುದು ಬಿಟ್ಟರೆ ಬೇರೆನೂ ಬರದು, ನನ್ನ ಕಾಯಕ ಅಷ್ಟೇ.. ದಿನಗಳುರುಳುತ್ತಿದ್ದವು.. ಕೈಯಲ್ಲಿ ತಂದ ಕಾಸು ಮುಗಿಯುವ ಹಂತಕ್ಕೆ ಬಂದಿತ್ತು. ಆದರೂ ಈ ನಡುವೆ ಒಂದು ವಿಚಾರವಂತೂ ಹೇಳಲೇಬೇಕು, ಪ್ರತಿದಿನ ಬೆಳಗ್ಗೆ ಆಫೀಸಿಗೆ ಚಹಾ ಕಾಫಿ ತರುವ ಹುಡುಗನೊಬ್ಬನಿದ್ದ ಆದರೆ ಅವನ ಬಳಿ ಚಹಾ ಸೇವಿಸಬೇಕಾದರೆ ನಾನು 01 ವಾರಗಳ ಕಾಲ ಕಾದಿದ್ದೇನೆ, ಕಾರಣವಿಷ್ಟೇ, ನಾನಂತೂ ಪಕ್ಕಾ ಹಳ್ಳಿಗ, ಒಂದೊಂದು ಪೈಸೆಗೂ ಲೆಕ್ಕ ಇಡುವವನು, ಆಫೀಸಿನೊಳಗೆ ಸಿಗುವ ಚಹಾ ಬಿಟ್ಟಿಯದ್ದೋ ಅಥವಾ ನಾವು ಹಣ ನೀಡಬೇಕೋ ಎಂದು ತಿಳಿಯಲು ಒಂದು ವಾರ ಚಹಾ ಸೇವಿಸಲಿಲ್ಲ ಅಷ್ಟೇ..  ಇನ್ನೂ ಆ ಚಹಾಗೂ ನಾವೇ ಹಣ ನೀಡಬೇಕಾದರೆ ನನ್ನಲ್ಲಿರುವ ಅಲ್ಪ ಕಾಸೂ ವ್ಯರ್ಥವಾಗಿ ಬೇಗನೇ ಭಿಕ್ಷುಕನಾಗಬೇಕಾದ ಪರಿಸ್ಥಿತಿ ಬರಬಹುದು ಎಂದು ಅಷ್ಟೇ..
 ಇವೆಲ್ಲದರ ನಡುವೆ ಒಂದು ವಿಚಾರವಿದೆ, ತಂದಿರುವ ಕಾಸು 15 ದಿನಕ್ಕೆ ಖರ್ಚಾಗಿ ಬಿಟ್ಟಿದೆ, ಇನ್ನೊಬ್ಬರ ಬಳಿ ಕೇಳುವಷ್ಟು ಸ್ನೇಹವಿಲ್ಲ, ಏನು ಮಾಡೋಣ ಊಟಕ್ಕೂ ಕಾಸಿಲ್ಲ, ಈಗ ನನಗೆ ನಗು ಬರುವಂತಿದೆ, ಆದರೆ ಅಂದಿನ ನನ್ನ ಪರಿಸ್ಥಿತಿ ನನಗೇ ಕಣ್ಣೀರು ತರಿಸುತ್ತಿತ್ತು, ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ಊಟಕ್ಕೆಂದು ತೆರಳಿದರೆ ಆನು ಹೋಟೆಲ್‍ಗೆ ಹೋಗಿ ಊಟ ಮಾಡುತ್ತೇನೆಂದು ಹೋಗುತ್ತಿದ್ದುದ್ದು ದೇವಸಂದ್ರ ಬಸ್ ನಿಲ್ದಾಣಕ್ಕೆ, ಅಲ್ಲಿ ಒಂದೈದು ನಿಮಿಷ ಕುಳಿತು ಹಸಿವಿನ ಮನದಲ್ಲೇ ಕಣ್ಣೀರಾಗಿದ್ದೂ ಇದೆ. ಬಳಿಕ ಆಫೀಸಿಗೆ ಮರಳಿ ಬಂದು ಊಟವಾಯಿತೆಂದು ಸುಳ್ಳು ಹೇಳಿದ್ದೂ ಇದೆ.
        6 ತಿಂಗಳ ಬಳಿಕ ನನ್ನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂದು ಯಾರೋ ಗುರುತಿಸಿದರೆಂದು ಕಾಣುತ್ತದೆ, ನನ್ನನ್ನು ಪ್ರೋಮೋ ಡಿಪಾರ್ಟ್‍ಮೆಂಟ್ ಗೆ ವರ್ಗಾವಣೆ ಮಾಡಿದ್ದರೋ, ಈ ಸಾಫ್ಟ್‍ವೇರ್ ಗಳ ತಲೆ ಬುಡವೇ ನನಗೆ ತಿಳಿದಿಲ್ಲ ಏನು ಮಾಡಲಿ ಎಂದು ಯೋಚಿಸುತ್ತಿದ್ದೆ , ಆಗ ದೇವದೂತರಾದದ್ದು ನಾಗೇಂದ್ರನ್ ಸರ್, ಮತ್ತು ಪ್ರಸನ್ನ ಸರ್, ನಾ ಹೇಳುವುದಕ್ಕೂ ಮುನ್ನವೇ ಅವರೇ ಎಲ್ಲ ಕಾರ್ಯಗಳನ್ನು ಮನಗಂಡು ಮಾಡಿ ಮುಗಿಸುತ್ತಿದ್ದರು, ಆದರೂ ಈ ಪುಣ್ಯಾತ್ಮನನ್ನು ವೈಜ್ಞಾನಿಕವಾಗಿ ಹೇಗಾದರೂ ಮುಂದಡಿ ಇಡಿಸಬೇಕೆಂದು ಛಲ ತೊಟ್ಟ ನಾಗೇಂದ್ರನ್ ಸರ್ ಅಂತೂ ಇಂತೂ ಪ್ರೀಮಿಯರ್ ಪ್ರೋ ಸಾಫ್ಟ್‍ವೇರ್ ಕಲಿಸುವ ಪ್ರಯತ್ನ ಮಾಡಿದರ , ಇರುವ ಕೊಂಚ ಸಮಯದಲ್ಲಿ ಅಲ್ಪಸ್ವಲ್ಪ ಪ್ರಿಮಿಯರ್ ಪ್ರೋ ನಾ ಕಲಿತಿರುವೆ.
        ಆಯುಷ್ ವಾಹಿನಿಯಲ್ಲಿ ಒಂದುವರೆ ವರುಷಗಳಿಂದ ದುಡಿಯುತ್ತಿದ್ದ ನನಗೆ ಅದೇಕೋ ಆಯುಷ್ ವಾಹಿನಿಯಿಂದ ನಿರ್ಗಮಿಸುವ ಮನಸ್ಸಾಯಿತು, ರಾಜಿನಾಮೆ ನಿರ್ಧಾರವನ್ನು ಕೊನೆಗೂ ತಿಳಿಸಿದೆ, ಸ್ವಂತ ಕುಟುಂಬದ ಸದಸ್ಯರಂತೆ ಪ್ರೀತಿಸುವ ಸಹೋದ್ಯೋಗಿಗಳನ್ನು ಬಿಟ್ಟು ತೆರಳುವುದು ಕೊಂಚ ಕಷ್ಟದ ವಿಚಾರವೇ, ಆದರೇನು ಮಾಡಲಿ, ನಿರ್ಧಾರ ಕೈಗೊಂಡಾಗಿದೆ, ನಾನು ಸಾಧಿಸಬೇಕಾದ ಕಾರ್ಯ ಬಹಳಷ್ಟಿವೆ, ಇರುವುದು ಅಲ್ಪ ಸಮಯ ಅದರಲ್ಲಿ ಏನಾದರೂ ಸಾಧನೆ ಮಾಡುವ ಹಂಬಲ..
         ಈ ಆಯುಷ್ ವಾಹಿನಿಯ ಪಯಣದಲ್ಲಿ ನನ್ನೊಂದಿಗೆ ನನ್ನವರೆಂದು ಇದ್ದವರು, ಶಮಾ ಮೇಡಂ. ನನ್ನೊಲವಿನ ರಂಜಿನಿ ಮೇಡಂ, ನಾಗೇಂದ್ರನ್ ಸರ್, ಪ್ರಸನ್ನ ಸರ್, ದುರ್ಗಾಧರನ್ ಸರ್, ಸುಂದರಮ್ ಸರ್, ಇಂಚರಾ, ತಲ್ವಾರ್ ಸರ್,ಭಾರತಿ ಮೇಡಂ ಉಮೇಶ್, ಮಂಜು ಸರ್ ಸುಬ್ಬು ಸರ್, ಸತೀಶ್ ಸರ್, ಸಂಧ್ಯಾ ಮೇಡಂ, ಭರತ್ ಸರ್, ಮನೀಷಾ, ಬಾಲಾಜಿ ಸರ್, ಶ್ರೀಕಾಂತ್ ಸರ್ ಇವರೆಲ್ಲರಿಗೂ ಕೃತಜ್ಞತಾಪೂರ್ವಕ ಧನ್ಯವಾದ..


ಭೂಮಿ ಇಲ್ಲ ಚೌಕಾಕಾರ
ಇರುವುದು ಅದು ಗೋಲಾಕಾರ..
ಈ ಗೋಳು ತುಂಬಿದ ಗೋಲಿಯಲ್ಲಿ
ನಾವೆಲ್ಲರೂ ಭೇಟಿಯಾಗಲೇ ಬೇಕು
ಒಂದಲ್ಲಾ ಒಂದು ದಿನ ಭೇಟಿ
ಖಂಡಿತಾ.. ಆದರೆ ಆ ಭೇಟಿಯಲ್ಲಿ ನಾ ಹೇಳುವ ಒಂದೇ ಮಾತು
“ ಜೀವನದ ಹಾದಿ ತೋರಿದ ನಿಮಗೆಲ್ಲಾ ಪ್ರೀತಿಯ ಧನ್ಯವಾದ”

Wednesday, 15 May 2019

ಮಮತೆಯ ಮಡಿಲು ಮಮತಕ್ಕ..


ಹೌದು ಹಲವಾರು ದಿನಗಳಿಂದ ಗೆದ್ದಲು ಹಿಡಿದಿದ್ದ  ನನ್ನ ಬ್ಲಾಗ್‍ನಲ್ಲಿ ಏನಾದರೂ ಬರೆಯಲೇ ಬೇಕು ಮತ್ತದೇ ಬ್ಲಾಗಿನ ಬಾಗಿಲು ತೆರೆಯಬೇಕೆನಿಸಿತ್ತು ಆದರೆ ಏನು ಬರೆಯಲಿ ಹೇಗೆ ಬರೆಯಲಿ ಎನ್ನುವುದೇ ಚಿಂತೆಯಾಗಿತ್ತು.. ಬರೆಯುವುದೇನೋ ಸರಿ ಆದರೆ ಬರೆಯಲೊಂದು ವಿಷಯ ಬೇಕಿತ್ತಲ್ಲ.. ಗೀಚಬೇಕೆಂಬ ಹಂಬಲ ಒಂದೆಡೆಯಾದರೆ ಗೀಚಲು ವಿಷಯಗಳಿಲ್ಲ ಎನ್ನುವ ಆ ಆಲಸ್ಯದ ಮನಸ್ಸು ಮತ್ತೊಂದೆಡೆ.. ಇವೆಲ್ಲವನ್ನೂ ಸಂಭಾಳಿಸಲು ಉತ್ತಮ ಘಳಿಗೆಯೊಂದರ ಹುಡುಕಾಟದಲ್ಲಿದ್ದಾಗ ಫಿನಿಕ್ಸ್‍ನಂತೆ ನನ್ನ ಮನಸ್ಸಿಗೆ ತೋಚಿದ್ದು ಒಂದೇ ವಿಚಾರ ನಮ್ಮ ಮನೆಯ ಗೃಹಪ್ರವೇಶದ ವಿಚಾರ.. ಗೃಹ ಪ್ರವೇಶದ ವಿಚಾರ ಎನ್ನುವುದಕ್ಕಿಂತ ಸಂಬಂಧಗಳೇ ಹಳಸಿ ನಮ್ಮವರೇ ನಮಗೆ ವೈರಿಗಳಾಗುತ್ತಿರುವ ಸಂದರ್ಭದಲ್ಲಿ ಕೂಡಿ ಬಾಳಿದರೆ ಸ್ವರ್ಗಸುಖ ಎನ್ನುವ ನೀತಿಪಾಠ ಕಲಿಸಿದ ನಮ್ಮ ಕುಟುಂಬ.

  ಅಯ್ಯೋ ಒಂದು ಲೇಖನ ಬರೆಯಲು ಯಾಕಪ್ಪಾ ಇಷ್ಟೋಂದು ಪೀಠಿಕೆ ಹಾಕುತ್ತಿದ್ದಾನಲ್ಲಾ ಎಂದು ಯೋಚಿಸುತ್ತಿದ್ದೀರಾ?? ಹಾಗಾದ್ರೆ ಯೋಚನೆ ಮಾಡೇ ಮಾಡಿ.. ಇನ್ನೂ ಆ ವಿಚಾರ ನಿಮ್ಮ ಮನದೊಳಗೆ ಬಂದಿಲ್ಲವಾದರೆ ಒಮ್ಮೆ ಯೋಚಿಸಿ.
ಹೌದು ನಾ ಹೇಳಹೊರಟಿರುವುದು ಒಬ್ಬ ಅಪೂರ್ವ ವ್ಯಕ್ತಿಯೊಬ್ಬರ ಬಗ್ಗೆ. ಒಬ್ಬ ಪ್ರೀತಿಯ ವ್ಯಕ್ತಿಯೊಬ್ಬರ ಬಗ್ಗೆ. ನಾ ಈ ವರೆಗೆ ಅವರನ್ನು ನೋಡಿದ್ದು ಮಾತನಾಡಿಸಿದ್ದು ಅಲ್ಪಸ್ವಲ್ಪವಾದರೂ ಅವರ ಪ್ರೀತಿದುಂಬಿದ ಮಾತುಗಳು ನಿಷ್ಕಳಂಕದ ಮನಸ್ಸಿನಾಳವನ್ನು ನೋಡಿದ್ದು ಗೃಹಪ್ರವೇಶದ ಸುಸಂದರ್ಭದಲ್ಲಿ. ಅವರ ಕಾರ್ಯದ ಬಗ್ಗೆ ತಿಳಿಸಹೋದರೆ ಅಕ್ಷರಗಳೂ ಕೂಡಾ ತಮ್ಮನ್ನು ತಾವು ಪ್ರೀತಿಸಬಹುದೇನೋ. ಅಂತಹಾ ವ್ಯಕ್ತಿತ್ವ ಅವರದ್ದು. ಹಿಂದೂ ಸಂಪ್ರದಾಯದಲ್ಲಿ ಒಂದು ಗೃಹಪ್ರವೇಶದ ಸಂಧರ್ಭವೆಂದರೆ ಹಲವಾರು ಆಚಾರ ವಿಚಾರಗಳು , ಪೂಜೆ ಪುನಸ್ಕಾರಗಳು ಸರ್ವೇ ಸಾಮಾನ್ಯ. ಗೃಹಪ್ರವೇಶದ ಮುನ್ನದಿನದ ವಾಸ್ತುಪೂಜೆಯಿಂದ ಹಿಡಿದು ಗೃಹಪ್ರವೇಶದ ದಿನದ ಮಧ್ಯಾಹ್ನದ ಊಟದವರೆಗೂ ಹಲವಾರು ಕಾರ್ಯಗಳು ಇದ್ದೇ ಇರುತ್ತದೆ.  ಈ ಎಲ್ಲಾ ಕಾರ್ಯಗಳಲ್ಲೂ ಮನೆಯವರೆಲ್ಲರೂ ಕೂಡಿ ಕೆಲಸ ಮಾಡುವುದು ಸರ್ವೇ ಸಾಮಾನವಲ್ಲವೇ ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು ಆದರೆ ವಿಶೇಷ ಪೂಜೆ ಪುನಸ್ಕಾರಗಳಲ್ಲಲ್ಲ ಬದಲಾಗಿ ಆ ಕಾರ್ಯಕ್ರಮದಲ್ಲಿ ನನಗೆ ಸ್ಫೂರ್ತಿಯಾದ ವ್ಯಕ್ತಿಯೊಬ್ಬರು.
 ಹೆಸರು ಮಮತಾ. ವೃತ್ತಿಯಲ್ಲಿ ಶಾಲಾ ಶಿಕ್ಷಕಿ, ಮೃದುವಾದ ಮನಸ್ಸು ಅಷ್ಟೇ ಏಕೆ ಆಕೆ ಛಲಗಾತಿ ಎಂದರೆ ಖಂಡಿತಾ ತಪ್ಪಾಗಲಾರದು. ತನ್ನ ಜೀವನದಲ್ಲಿ ಎದುರಾದ ಏಳುಬೀಳುಗಳನ್ನೆಲ್ಲಾ ಸಮವಾಗಿ ಸ್ವೀಕರಿಸಿ, ಅದನ್ನು ಸವಾಲೆಂಬಂತೆ ಗೆದ್ದುಬಂದಾಕೆ. ಪುರಾಣದಲ್ಲಿ ಕೇಳುವ ನಂದಗೋಕುಲವನ್ನು ನಾನು ಕೇಳಿದ್ದೇನಷ್ಟೇ ಆದರೆ ನಿಜವಾದ ನಂದಗೋಕುಲವನ್ನು ನಾನವರಲ್ಲಿ ಕಂಡಿದ್ದೇನೆ. ಪ್ರೀತಿಗೆ ಪ್ರೀತಿ ನೀಡುತ್ತಾ ಬಂದಿರುವ ಆಕೆ ನಿಜವಾಗಿಯೂ ದೇವತೆಯೇ ಸರಿ. ಇರಲಿ ಇದೀಗ ನೈಜ ವಿಷಯಕ್ಕೆ ಬರೋಣ.

ಅಂದು ಗೃಹಪ್ರವೇಶದ ಕಾರ್ಯನಿಮಿತ್ತ ಮನೆಯೆಲ್ಲಾ ಸಿಂಗಾರಗೊಂಡಿತ್ತು, ಮನೆಮಂದಿಯೆಲ್ಲಾ ಖುಷಿಯಿಂದ ಮಿಂದೆದ್ದಂತೆ ಭಾಸವಾಗುತ್ತಿದ್ದರು, ಹತ್ತಾರು ದಿನಗಳಿಂದ ಮನೆಕೆಲಸದ ವಿಚಾರದಲ್ಲಿ ಬೆಂದು ಬೇಗುದಿಯಾಗಿದ್ದ ಮನೆಮಂದಿಯೆಲ್ಲಾ ಈ ಕಾರ್ಯ ಒಮ್ಮೆ ಮುಗಿದರೆ ಸಾಕೆಂಬ ಮನಸ್ಥಿತಿಯಲ್ಲಿದ್ದರೇನೋ, ಇದೇ ಸಂದರ್ಭದಲ್ಲಿ ನನ್ನನ್ನು ಆಕರ್ಷಿಸಿದ್ದು ಮಮತೆಯ ಅಕ್ಕ ಮಮತ ಅಕ್ಕ. ನೂರಾರು ಜನರು ಮನೆಯೊಳಗೆ ಓಡಾಡಿ ಮನೆಯೆಲ್ಲಾ ಕೊಂಪೆಯಂಆಗಿದ್ದುದ್ದನ್ನು ನಾನು ಕಂಡಿದ್ದೆ. ಆದ್ರೆ ಈ ಅಕ್ಕನ ಕೆಲಸಗಳಿಂದ ಮನೆಯೆಲ್ಲಾ ಕ್ಷಣಮಾತ್ರದಲ್ಲಿ ಒಪ್ಪ ಓರಣವಾಗಿದ್ದು ಮಾತ್ರ ಸುಳ್ಳಲ್ಲ.. ಅಡುಗೆ ಕೋಣೆಯಿಂದ ಪ್ರಾರಂಭವಾದ ಆಕೆಯ ಓರಣದ ಕಾರ್ಯ ಮನೆ ಸಂಪೂರ್ಣವಾಗಿ ಸ್ವಚ್ಛಗೊಳ್ಳುವ ವರೆಗೂ ನಿಂತಿರಲಿಲ್ಲ. ಆಕೆಯೊಂದಿಗೆ ಕೈಜೋಡಿಸುತ್ತಾ ಕೆಲಸ ಮಾಡುತ್ತಿದ್ದ ನನಗೆ ಮಧ್ಯೆ ಎಲ್ಲೋ ಒಂದು ಕಡೆ ಆಲಸ್ಯ ಉಂಟಾದರೂ ಆಕೆಯ ಮುಖದಲ್ಲಿ ಆಲಸ್ಯದ ಭಾವನೆಯಾಗಲೀ, ಬೇಸರದ ಲವಲೇಶವೂ ಕಂಡುಬಾರದ್ದು ನನಗೆ ಅತ್ಯಾಶ್ಚರ್ಯ ಉಂಟು ಮಾಡಿದ್ದಂತೂ ಸುಳ್ಳಲ್ಲ. ಇದು ಬೆಳಗಿನ ಮಾತಾಯಿತು, ಸ್ವಚ್ಛತಾ ಕಾರ್ಯ ಅದು ಇದು ಎಂದು ಓಡಾಡುತ್ತಿದ್ದ ಮಮತಕ್ಕನ ಎನರ್ಜಿ ಮಧ್ಯಾಹ್ನವಾದರೂ ಕಮ್ಮಿಯಾಗಿಲ್ಲ ಅಂತೀನಿ. ಉಹ್... ಬೆಳಗಿನ ಒಮ್ಮೆಯ ಕಾರ್ಯಗಳನ್ನೆಲ್ಲಾ ಮುಗಿಸಿ ಒಂದೆರಡು ನಿಮಿಷ ಕುಳಿತಿದ್ದಾರೋ ಗೊತ್ತಿಲ್ಲಾ. ಮಧ್ಯಾಹ್ನದ ಸತ್ಯನಾರಾಯಣ ಪೂಜೆಯ ಪ್ರಸಾದ ವಿತರಣೆಯ ಸಂದರ್ಭದಲ್ಲಿ ಅರ್ಚಕರ ಬಳಿಯಲ್ಲಿ ಅರ್ಚಕರ ಸಹಾಯಕ್ಕೆ ಮಮತಕ್ಕ ಹಾಜರ್... ಅಯ್ಯೋ ಶಿವನೇ ಈ ಮಹಾತಾಯಿಗೆ ಸುಸ್ತೆಂಬುದು ಇಲ್ಲವೇ ಎಂದು ನಾನು ನನ್ನಲ್ಲೇ ಅಂದುಕೊಂಡು ಸುಮ್ಮನಾದೆ. ಎಲ್ಲಾ ಕಾರ್ಯಗಳು ಮುಗಿದ ಮೇಲೆ ಮಧ್ಯಾಹ್ನದ ಭೋಜನ ಸವಿದ ನಾನು ಇನ್ನೇನು ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಚಿಂತಿಸುತ್ತಾ ಅಡುಗೆ ಕೋಣೆಯತ್ತ ಕಣ್ಣು ಹಾಯಿಸಿದರೆ ಮಮತಕ್ಕ ಮತ್ತೆ ಅಡುಗೆ ಕೋಣೆಯಲ್ಲಿ ಕೆಲಸಕ್ಕೆ ಹಾಜರ್. ಪಾತ್ರೆಗಳನ್ನೆಲ್ಲ ಒಪ್ಪ ಓರಣವಾಗಿರಿಸಿ, ಪ್ರಸಾದಗಳನ್ನೆಲ್ಲಾ ಪ್ಯಾಕ್  ಮಾಡಿ ಎಲ್ಲರಿಗೂ ವಿತರಿಸುವ ಕೆಲಸದಲ್ಲಿ ಮಮತಕ್ಕ ಬ್ಯುಸಿ. ಆಮೇಲೆ ಒಂದೆರಡು ಗಂಟೆಗಳ ಕಾಲ ತಮ್ಮ ಮನೆಗೆ ಹೋಗಿ ಅಲ್ಲಿಯ ಕೆಲಸವನ್ನೂ ಮುಗಿಸಿ ರಾತ್ರಿಯ ವೇಳೆಯಲ್ಲಿ ಮಮತಕ್ಕ ಮತ್ತೆ ಹಾಜರ್. ಅಡುಗೆ ಕೋಣೆಯಲ್ಲಿ ಅವರದ್ದೇ ದರ್ಬಾರ್.. ಮಮತ ಇರುವಾಗ ನನಗೇನು ಯೋಚನೆ ಎಂಬಂತೆ ಅತ್ತೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾದಂತೆ ತೋರಿತು. ಮತ್ತೊಂದು ರೌಂಡ್ ಕ್ಲೀನಿಂಗ್ ಎಂಬಂತೆ ರಾತ್ರಿಯ ಕ್ಲೀನಿಂಗ್ ಕಾರ್ಯಗಳನ್ನೆಲ್ಲ ಮುಗಿಸಿ, ಅಳಿದುಳಿದ ಪದಾರ್ಥಗಳನ್ನೆಲ್ಲಾ ಹಾಳಾಗದಂತೆ ಬಿಸಿ ಮಾಡಿಟ್ಟ ಬಳಿಕ ಮಮತಕ್ಕ ತನ್ನ ಕೆಲಸಗಳಿಗೆ ವಿರಾಮ ಹೇಳಿದಾಗ ಸಮಯ ರಾತ್ರಿ 09:30ಆಗಿರಬಹುದೇನೋ..
ಇಷ್ಟೇಲ್ಲಾ ಕೆಲಸ ಎಲ್ರೂ ಮಾಡ್ತಾರೆ ಇದರಲ್ಲೇನು ವಿಶೇಷ ಅಂದುಕೊಳ್ಳದಿರಿ, ವಿಶೇಷ ಇರುವುದೇ ಇಲ್ಲಿ.. ಇಷ್ಟು ಕೆಲಸ ಮಾಡಿದ ಮೇಲೂ ಮಮತಕ್ಕನ ಮುಖದಲ್ಲಿ ಸುಸ್ತು ಎಂಬಂತ ವಿಚಾರವನ್ನು ನಾನು ಕಂಡದ್ದಿಲ್ಲ.. ಅದಕ್ಕೆ ಇರಬೆಕು ಹಿರಿಯರು ಹೇಳಿದ್ದು “ ಹೆಣ್ಣು ಸಂಸಾರದ ಕಣ್ಣು “ ಎಂದು.. ಅಂದೇ ನಿಶ್ಚಯ ಮಾಡಿಕೊಂಡದ್ದು ಕೆಲಸ ಮಾಡಿದರೆ ಮಮತಕ್ಕನಂತೆ ಮಾಡಬೇಕು, ನಗುಮೊಗವಿದ್ದರೆ ಮಮತಕ್ಕನಂತಿರಬೇಕು. ಎಂದು..
ಇವತ್ತಿಗೆ ಇಷ್ಟು ಸಾಕು ನಾಳೆ ಇನ್ನೊಬ್ಬ ವ್ಯಕ್ತಿಯ ಚಿತ್ರಣ ಬರೆಯೋಣವೆಂದಿದ್ದೇನೆ. ಇಷ್ಟವಾದರೆ ಬರೆಯಲು ಪ್ರೋತ್ಸಾಹಿಸಿ ಇಲ್ಲವಾಗಿದ್ದರೆ ಛೀ ಥೂ ಎಂದಾದರೂ ಉಗಿಯಿರಿ.. ಆಯ್ಕೆ ನಿಮ್ಮದು.. ಧನ್ಯವಾದ..

Monday, 4 February 2019

ಶಿಸ್ತಿನ ಸಿಪಾಯಿಗೆ ಅಕ್ಷರದ ನಮನ

ಹೌದು ಇನ್ನು ಆ ಕುರ್ಚಿಯೂ ಬೇಸರಿಸಬಹುದೇನೋ... ಕಾನ್ಫರೆನ್ಸ್ ರೂಂನಲ್ಲಿರುವ ಬಿಳಿ ಬಣ್ಣದ ಬೋರ್ಡ್ ಕೂಡಾ ನನ್ನ ಮೇಲೆ ಗೀಚುವವರಿಲ್ಲ ಎಂದು ಕನವರಿಸಬಹುದೇನೋ...
ಹೌದು ನಾ ಹೇಳ ಹೊರಟಿರುವುದು ಒಂದು ಅನರ್ಘ ರತ್ನದ ಬಗ್ಗೆ. ಹಲವಾರು ವರುಷಗಳ ಕಾಲ ಕಾಮಧೇನುವಿಗೆ ಪರಿಚಿತನಾದ ಒಬ್ಬ ಶಿಸ್ತಿನ ಸಿಪಾಯಿ ಇಂದು ಕಾಮಧೇನು ಸಂಸಾರವನ್ನು ತೊರೆದು ತನ್ನ ಕಾರ್ಯನಿಮಿತ್ತ ಇನ್ನೊಂದೆಡೆ ತೆರಳಲನುವಾದಂತೆ ನಮ್ಮ ಮನದಲ್ಲೇನೋ ತಳಮಳ.. ನನ್ನ ಆಯುಷ್ ಟಿವಿಯ ಸಂಸಾರದೊಂದಿಗೆ ಸೇರಿಸಿದ ಗುರು ಒಬ್ಬರಾದರೆ , ಮಾಧ್ಯಮದ ವಿಚಾರವನ್ನು ನನಗೆ ಅರ್ಥ ಮಾಡಿಸಿದ ಗುರು ಮತ್ತೋರ್ವರು.. ಅವರೇ ನಮ್ಮ ನೆಚ್ಚಿನ ಶಿವಕುಮಾರ್ ಸರ್

ಏರು ಧ್ವನಿ, ಶಾಂತ ವ್ಯಕ್ತಿತ್ವ ಇದು ಸಾಧಾರಣವಾಗಿ ಸಿಗುವುದು ವಿರಳವೇ ಸರಿ.. ಆದರೆ ಅದನ್ನೆಲ್ಲವನ್ನೂ ಮೈಗೂಡಿಸಿಕೊಂಡಂತಹಾ ಸರಳತೆಯ ಸಾಕಾರಮೂರ್ತಿ ಶಿವಕುಮಾರ್ ಸರ್.
ಒಂದು ಕಾರ್ಯಕ್ರಮ ಯಶಸ್ವಿಯಾಗಿ ಸಾಂಗವಾಗಿ ಸಾಗಬೇಕೆಂದರೆ ಅದರಲ್ಲಿ ಸ್ಕ್ರಿಪ್ಟ್ ಬಹಳ ಮಹತ್ತರವಾದಂತಹಾ ಪಾತ್ರ ವಹಿಸುತ್ತದೆ ಎನ್ನುವುದು ಸುಳ್ಳಲ್ಲ. ಆದರೆ ಅದರ ಮೌಲ್ಯವನ್ನೇ ಅರಿಯದ ಜನರ ಮಧ್ಯೆ ಇದ್ದುಕೊಂಡೆ ಸೌಮ್ಯವಾಗಿಯೇ ಅವರೊಂದಿಗೆ ಹೋರಾಡಿ, ಸ್ಕ್ರಿಪ್ಟ್ ನ ಮೌಲ್ಯವನ್ನು ತಿಳಿಸಿದವರು ಶಿವಕುಮಾರ್ ಸರ್. ಬಕೇಟ್‍ಗಳ ನಡುವಲ್ಲಿಯೇ ಇದ್ದರೂ ಎಂದಿಗೂ ಬಕೇಟ್ ಹಿಡಿದವರನ್ನು ಪೋಷಿಸಿದವರಲ್ಲ, ನೈಜ ಪ್ರತಿಭೆಗೆ ಬೆಲೆ ನೀಡುತ್ತಾ ಪ್ರತಿಭೆಗಳ ತಲಾಷೆಯನ್ನೂ ನಡೆಸಿ , ಸೂಕ್ಷ್ಮವಾಗಿ ಕುಳಿತಲ್ಲಿಯೇ ಪ್ರತಿಯೊಬ್ಬರ ವ್ಯಕ್ತಿತ್ವವನವನು ಅಳೆಯುತ್ತಿದ್ದ ಪುಣ್ಯಾತ್ಮನಾತ. ಯಾರೇ ಇರಲಿ ತನ್ನ ನಿರ್ಧಾರವನ್ನು ಧೈರ್ಯದಿಂದ ತಿಳಿಸಿ ಬಿಡುತ್ತಿದ್ದವರು. ತಮಗಿತ್ತ ಕೊನೇಯ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಎಲ್ಲವನ್ನೂ ಮುಗಿಸಿ
ಶಿಸ್ತಿನಿಂದ ಆಯುಷ್ ವಾಹಿನಿಯಿಂದ ನಿರ್ಗಮಿಸಿದರು. ಅವರು ನಿರ್ಗಮಿಸುವ ಸಂದರ್ಭದಲ್ಲಿ ಯಾರ ಕಣ್ಣಂಚು ತೇವವಾಗದಿದ್ದರೂ ಮನದಾಳದಲ್ಲಿ ಅವರನ್ನು ಆ ಕುರ್ಚಿಯಲ್ಲಿ ಇನ್ನು ನೋಡಲಾಗುವುದಿಲ್ಲವಲ್ಲ ಎಂಬ ಅಸಹಾಯಕ ಭಾವನೆ ಮೂಡಿದ್ದಂತೂ ಸುಳ್ಳಲ್ಲ.. ಅವರಿದ್ದಷ್ಟು ಕಾಲ ಒಬ್ಬ ಬರಹಗಾರನಾದ ನನಗೆ ಮರ್ಯಾದೆಯಿತ್ತು, ಇನ್ನು ಮುಂದೆ ಅದು ಇರುವುದೆಂಬ ನಂಬಿಕೆಯಿಲ್ಲ.. ಆದರೂ ಅವರ ಮಾರ್ಗದರ್ಶನ ನಮ್ಮೊಂದಿಗಿದೆ ಎಂಬ ಭಾವನೆಯಲ್ಲಿ.. ಎಲ್ಲೇ ಇರಲಿ ಹೇಗೇ ಇರಲಿ ಚೆನ್ನಾಗಿರಲಿ.

ಇಂತಿ ಪ್ರೀತಿಯಿಂದ
ಅಕ್ಷಯ್ ಜಿ ಭಟ್


ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...