Tuesday, 11 June 2019

ಇಷ್ಟೇ ರೀ ನಮ್ ಕಥೆ..

ಮನಸು ವಿಹ್ವಲವಾಗಿತ್ತು, ಯೋಚನಾಲಹರಿಯಿಲ್ಲದೆ ಮನಸ್ಸು ಉಪ್ಪು ಹುಳಿ ಖಾರವಿಲ್ಲದ ಚಿತ್ರಾನ್ನದಂತಾಗಿತ್ತು, ಆಫೀಸಿನ ನಾಲ್ಕು ಗೋಡೆಯೊಳಗೆ ಕುಳಿತು ಬೇಸರವಾದಂತಾಗಿ , ಇನ್ನೇನು ನನ್ನ ಕೊನೇಯ ಕೆಲಸವನ್ನೆಲ್ಲಾ ಮುಗಿಸಿ ಹೊರಡೋಣವೆಂದಿದ್ದೆ.. ಆಗಲೇ ಕಂಡಿದ್ದು ಆ ಪುಣ್ಯಾತ್ಮನ ಮುಖವನ್ನು.. ಸ್ವಲ್ಪ ಹೊತ್ತಿನಲ್ಲೇ ಬರುವೆನೆಂದು ಆತನೇನೋ ಹೊರಟು ಹೋದ ಆದರೆ, ನಮ್ಮ ಪಾಡು ಕೇಳುವವರಾರು? ಈ ಚಿತ್ರಾನ್ನವನ್ನು ಅತ್ತ ಎಸೆಯಲೂ ಆಗದೇ ತಿನ್ನಲೂ ಆಗದೆ, ಸುಮ್ಮನೆ ಕುಳಿತಿರಲು, ಮನದ ಚಿಂತೆಗಳು ಪಲ್ಲಟವಾಗಬಹುದೇನೋ ಎಂದುಕೊಂಡು , ಚಹಾ ಸೇವನೆಗಾಗಿ ಪಕ್ಕದಲ್ಲಿನ ಅಂಗಡಿಯತ್ತ ಮನವಿಲ್ಲದ ತನುವು ಹೊರಟು ಹೋಯಿತು.
        ಕೈಯಲ್ಲಿ ಚಹಾದ ಗ್ಲಾಸನ್ನು ಹಿಡಿದಿದ್ದರೆ, ಮನಸ್ಸು ಪಾಕಿಸ್ಥಾನವೋ ಅಮೇರಿಕಾವೋ ಎಲ್ಲಾ ಕಡೆ ಸುತ್ತಾಡುತ್ತಲಿತ್ತು, ಥತ್ತೇರಿಕೆ, ಏಕೆ ಹೀಗಾಗುತ್ತಿದೆ ಎಂದು ಯೋಚಿಸುವುದಕ್ಕೂ ವ್ಯವಧಾನವಿಲ್ಲ, ತನ್ನಿಂದ ತಾನೆ ಮನಸ್ಸು ವಿಹ್ವಲವಾದಂತೆ ಭಾಸ. ಕಣ್ಣೋಟವಂತೂ ಮುಂದಿರುವ ಅಯ್ಯಂಗಾರ್ ಬೇಕರಿಯ ಕಡೆಗಿದ್ದರೆ, ಮನಸ್ಸು ಮಾತ್ರ ಎಲ್ಲೆಲ್ಲೋ ಓಡುತ್ತಿತ್ತು. ಕೈ ನನಗರಿವಿಲ್ಲದೇ ಇನ್ನೊಂದು ಗ್ಲಾಸ್ ಚಹಾ ಸೇವಿಸಬೇಕೆಂಬ ಆಜ್ಞೆ ನೀಡಿದಂತೆ ಭಾಸವಾಗಿ, ಇನ್ನೊಂದು ಗ್ಲಾಸ್  ಚಹಾ ಸೇವಿಸಿದ್ದೂ ಆಯಿತು. ಕನಸುಗಳ ಬೆನ್ನತ್ತಿ ಹೋಗಬೇಕಾದ ಮನಸ್ಸು ಭಾವನೆಗಳ ಬೆನ್ನತ್ತಿ ಹೋಗುತ್ತಿದೆ ಏನೋ ಎಂದು ಭಾಸವಾದಂತಿದೆ.

  ಅತ್ತ ಧರೆ ಇತ್ತ ಪುಲಿ ಎಂಬಂತಿದೆ ಬದುಕು, ಮುಂದೆ ಹೋದರೆ ಬಾಳುವೆನೋ ಬೀಳುವೆನೋ ಎಂಬ ಯೋಚನೆ ಒಂದೆಡೆಯಾದರೆ ಇಲ್ಲೇ ನಿಂತರೆ ನಿಂತ ನೀರಾಗಿಬಿಡುವೆನೋ ಎಂಬ ಭಾಸ, ಮನ ಕೇಳದು ನಿಂತ ನೀರಾಗಲೂ ಆಗದು ಅತ್ತ ಪುಲಿಯ ಬಾಯಿಗೆ ಬೀಳಲಾಗದು ಏನಾಗುವುದೋ ಬಲ್ಲವರಾರು? ದೇವನೊಬ್ಬನಿದ್ದಾನೆ, ದೇವದೂತನೂ ಇದ್ದಾನೆ, ಆತ ದಾರಿ ತೋರಿಸಬಹುದೇನೋ ಏನಾಗುತ್ತೋ ಕಾದು ನೋಡಬೇಕಾಗಿದೆ ಅಷ್ಟೇ..
        ಜೀವನವೆಂಬುವುದು ನಿಂತ ನೀರಾಗಬಾರದಷ್ಟೇ..
        ಭೋರ್ಗರೆಯುವ ಸಮುದ್ರವಾಗಿ, ಅತ್ತ ಉಪ್ಪಿಗೆ ಉಪ್ಪಾಗೆ
        ಇತ್ತ ಮಳೆಹನಿಯ ತರುವ ಮೋಡವಾಗಿ,
        ನಾಲ್ಕಾರು ಜನರಿಗೆ ಸಹಾಯವಾದರೆ ಸಾಕಷ್ಟೆ.


                                                          ಇಂತಿ ನಿಮ್ಮವ
                                                                   ಅಕ್ಷಯ್
 

                                           



No comments:

Post a Comment

ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...