ಕೆಲವೊಮ್ಮೆ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳ ಮೇಲೆ ನಿಜವಾಗಿಯೂ ಜಿಗುಪ್ಸೆ ಬಂದು ಬಿಡುತ್ತದೆ. ವಿದೇಶಗಳಲ್ಲಿರುವಂತೆ ಭಾರತದಲ್ಲಿ ಇತಿಹಾಸವನ್ನು ಸಂರಕ್ಷಿಸಿ ಇಡುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ. ಭಾರತದಲ್ಲಿ ಇತಿಹಾಸದ ಬಗ್ಗೆ ಯಾವ ಮಟ್ಟಿಗೆ ತಾತ್ಸಾರ ಇದೆ ಅಂದ್ರೆ ಇತಿಹಾಸ ಅಂದ್ರೆ ಕೇವಲ ಗಾಂಧಿ, ಮೊಘಲ್ ವಂಶ, ಆದಿಲಶಾಹಿಗಳು, ಟಿಪ್ಪು ಸುಲ್ತಾನ.. ಇಷ್ಟೇ...!!!!!
ಆದ್ರೆ ಅದಕ್ಕೂ ಮೀರಿದ ಹಲವು ಐತಿಹಾಸಿಕ ಕುರುಹುಗಳು ಭಾರತದಲ್ಲಿ ಇದೆ ಅಂದರೆ ನಂಬಲೇಬೇಕು..!!
ನಿಮ್ಮಲ್ಲಿ ನೀವು ಪ್ರಶ್ನೆ ಮಾಡಿಕೊಳ್ಳಿ, ಗೇರುಸೊಪ್ಪೆಯಲ್ಲಿ ರಾಣಿ ಚೆನ್ನಭೈರಾದೇವಿ ಎಂಬವಳು ಒಬ್ಬಳು ಇದ್ದಳು ಎಂದು ನಮ್ಮ ನಿಮ್ಮೆಲ್ಲರಲ್ಲಿ ಅದೆಷ್ಟು ಜನರಿಗೆ ಗೊತ್ತು..?
ಹೌದು ರಾಣಿ ಚೆನ್ನಭೈರಾದೇವಿಯ ಇತಿಹಾಸ ನನಗೂ ಗೊತ್ತಿಲ್ಲ ಆದ್ರೆ ಪ್ರಾಯಶಃ ನಾನು ದಿಗ್ವಿಜಯ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದಾಗ ನನ್ನ ಜತೆ ಕೆಲಸ ಮಾಡ್ತಿದ್ದ ಶೈಲಜಾ ಅವರು ಚೆನ್ನಭೈರಾದೇವಿಯ ಬಗ್ಗೆ ಕಥೆಗಳನ್ನ ಹೇಳ್ತಾ ಇದ್ರು. ಆ ಕಥೆಗಳನ್ನ ಕೇಳ್ತಾ ಇದ್ರೆ ಮೈ ರೋಮಾಂಚನ ಅನ್ನಿಸೋದು. ಒಬ್ಬ ರಾಣಿ ಪೋರ್ಚುಗೀಸರು, ಕೆಳದಿ ಅರಸರು, ಬಿಜಾಪುರದ ಸುಲ್ತಾನರ ಆಳ್ವಿಕೆಯ ನಡುವೆಯೇ 54 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಳು ಎಂದರೆ ನಿಜವಾಗಿಯೂ ನಂಬಲು ಅಸಾಧ್ಯ..!
ಇತಿಹಾಸದ ಪ್ರಕಾರ ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧಮಾಡಿದ. ಮಡಗೋವೆಯ ಬಳಿ ೧೫೪೨ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಿಯ ತಂಗಿಯೇ ಚೆನ್ನಭೈರಾದೇವಿ. ಪೋರ್ಚುಗೀಸರ ಜೊತೆಗಿನ ಒಪ್ಪಂದದಂತೆ ಕಪ್ಪವನ್ನು ಕೊಡಲಿಲ್ಲವೆಂದೂ, ಮಹಮದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳದ ಮೇಲೆ ದಾಳಿ ಮಾಡಿ ರಾಣಿಯನ್ನು ಸೋಲಿಸಿ ಭಟ್ಕಳವನ್ನು ಸುಟ್ಟುಹಾಕಿದ. ಅಕ್ಕನ ನಂತರ ತಂಗಿ ಚೆನ್ನಭೈರಾದೇವಿಗೆ ಹಾಡುವಳ್ಳಿಯ ಜೊತೆಗೆ ಗೇರುಸೊಪ್ಪೆಯ ಅಧಿಕಾರವೂ ದೊರಕಿತು.
ಚೆನ್ನಭೈರಾದೇವಿ ದಕ್ಷಿಣ ಗೋವಾದಿಂದ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಭಟ್ಕಳ, ಮಲ್ಪೆ,ಹೊನ್ನಾವರ, ಮಿರ್ಜಾನ್, ಅಂಕೋಲಾ, ಬೈಂದೂರು, ಕಾರವಾರಗಳಲ್ಲಿ ಆಳ್ವಿಕೆ ನಡೆಸುತ್ತಿದ್ದಳು ಎಂಬ ಮಾಹಿತಿ ಇದೆ. ಕರಾವಳಿಯ ಈ ಪ್ರಾಂತ್ಯಗಳ ಜತೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು,ಹನ್ನಾರ, ಬಿದನೂರು, ಸೌಳನಾಡು, ಆವಿನಹಳ್ಳಿ ಸೀಮೆಗಳು ಚೆನ್ನಭೈರಾದೇವಿಯ ಆಡಳಿತಕ್ಕೆ ಒಳಪಟ್ಟಿದ್ದವು ಎಂದು ಹೇಳಲಾಗುತ್ತಿದೆ. ಚೆನ್ನಭೈರಾದೇವಿಯ ಆಳ್ವಿಕೆಯ ಅವಧಿಯಲ್ಲಿ ಯುರೋಪಿನ ರಾಷ್ಟ್ರಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತಂತೆ.
ಚೆನ್ನಭೈರಾದೇವಿಯ ಕಾಲದ ಮಿರ್ಜಾನ್ ಕೋಟೆ, ಕಾನೂರು ಕೋಟೆಗಳು ಈಗಲೂ ಕಾಣಬಹುದು ಆದ್ರೆ ಕಾಡಿನ ನಡುವೆ ಇರುವ ಈ ಕೋಟೆ ಸರಿಯಾದ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ. ಪೋರ್ಚುಗೀಸರ ಮತಾಂತರದಿಂದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೆ ರಾಣಿ ಚೆನ್ನಭೈರಾದೇವಿ ತನ್ನ ರಾಜ್ಯದಲ್ಲಿ ಆಶ್ರಯ ನೀಡಿದ್ದಳು ಎಂದು ಹೇಳಲಾಗ್ತಿದೆ. ಜೈನ ಮತದವಳಾದ ರಾಣಿ ಅನೇಕ ಶೈವ, ವೈಷ್ಣವ ಮತ್ತು ಶಕ್ತಿ ದೇಗುಲಗಳನ್ನು ಕಟ್ಟಲು, ಜೀರ್ಣೋದ್ದಾರಕ್ಕೂ ನೆರವು ನೀಡಿದ್ದಳು ಎಂದು ಹೇಳಲಾಗುತ್ತಿದೆ . ಬಿದರೂರು ಅಥವಾ ವೇಣುಪುರದ ಯೋಗಾನರಸಿಂಹ ಸ್ವಾಮಿ ದೇಗುಲ ಮತ್ತು ವರ್ಧಮಾನ ಬಸದಿಗಳ ಜೀರ್ಣೋದ್ದಾರಕ್ಕೂ ರಾಣಿ ಚೆನ್ನಭೈರಾದೇವಿ ನೆರವು ನೀಡಿದ್ದಳು. "ಕರ್ನಾಟಕ ಶಬ್ದಾನುಶಾಸನ " ಎಂಬ ವ್ಯಾಕರಣ ಗ್ರಂಥ ರಚನಾಕಾರ, ಸ್ವಾದಿ ದಿಗಂಬರ ಜೈನ ಮಠದ ಯತಿ ಅಭಿನವ ಭಟ್ಟಾಕಲಂಕರು ಈ ರಾಣಿಯ ಆಶ್ರಯದಲ್ಲಿದ್ದರು ಎಂಬ ಐಹಿತ್ಯವಿದೆ.
ರಾಣಿ ಚೆನ್ನಭೈರಾದೇವಿಯ ಆಳ್ವಿಕೆಯ ಕಾಲದಲ್ಲಿ ಈಗಿನ ಕೇರಳದ ಕೊಚ್ಚಿನ್ ಬಂದರು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿತ್ತು. ಕೊಚ್ಚಿನ್ ಬಂದರಿನ ಕ್ಯಾಪ್ಟನ್ ಪೋರ್ಚುಗಲ್ನ ಆಲ್ಫೋನ್ಸೋ ಮೆಕ್ಸಿಯ ಎಂಬ ಪ್ರಾಂತ್ಯದ ರಾಜನಿಗೆ ಬರೆದ ಪತ್ರದಲ್ಲಿ "ಬಟಿಕಳ(ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್(ಕಾನೂರು),ಮರ್ಜೆನ್(ಮಿರ್ಜಾನ್) ಮತ್ತು ಅಂಕೋಲಾಗಳೆಂಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೇಡೋಸ್(ಹದಿನೈದನೆದ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳು ಮೆಣಸು ವಾರ್ಷಿಕವಾಗಿ ರಫ್ತಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಈ ಜಾಗಗಳು ಗೇರುಸೊಪ್ಪೆಯ ರಾಣಿ(ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿದೆ. ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿವೆ. ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು" ಎಂದು ಬರೆಯುತ್ತಾನೆ. ಆ ಬಳಿಕ 1606ರಲ್ಲಿ ಕೆಳದಿ ಮತ್ತು ಬಿಳಗಿಯ ಅರಸರು ಒಟ್ಟು ಸೇರಿ ಗೇರುಸೊಪ್ಪೆಯ ಮೇಲೆ ಆಕ್ರಮಣ ಮಾಡುತ್ತಾರೆ. ಈ ಸಂದರ್ಭದಲ್ಲಿ ನಡೆದ ಯುದ್ಧದಲ್ಲಿ ತನ್ನ ಸೇನಾಧಿಪತಿ ಗೊಂಡನಾಯಕನ ಮೋಸದಿಂದಾಗಿ ರಾಣಿ ಚೆನ್ನಭೈರಾದೇವಿ ಸೋಲುತ್ತಾಳೆ. ಈ ಸೋಲಿನ ಬಳಿಕ ಗೇರುಸೊಪ್ಪೆ ಕೆಳದಿ ಸಾಮ್ರಾಜ್ಯದ ಭಾಗವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಇವಿಷ್ಟು ಮಾತ್ರವಲ್ಲದೇ ರಾಣಿ ಚೆನ್ನಭೈರಾದೇವಿ ತನ್ನ ಆಳ್ವಿಕೆಯ ಕಾಲದಲ್ಲಿ ಅನೇಕ ಯುದ್ಧಗಳನ್ನು ನಡೆಸಿದ್ದರು ಎಂದು ಹೇಳಲಾಗಿದೆ. 1559 ಮತ್ತು 1570ರಲ್ಲಿ ಪೋರ್ಚುಗೀಸರ ವಿರುದ್ಧ ನಡೆದ ಯುದ್ಧಗಳಲ್ಲಿ ರಾಣಿ ಚೆನ್ನಭೈರಾದೇವಿ ಗೆಲುವು ಸಾಧಿಸಿದ್ದಳು ಎಂದು ಹೇಳಲಾಗಿದೆ. ಇದಷ್ಟೇ ಅಲ್ಲದೇ 1671ರಲ್ಲಿ ನಡೆದ ಯದ್ಧದ ಸಂಯುಕ್ತ ಸೇನೆಯ ನಾಯಕತ್ವವನ್ನು ರಾಣಿ ಚೆನ್ನಭೈರಾದೇವಿ ವಹಿಸಿದ್ದಳು ಎಂದು ಹೇಳಲಾಗುತ್ತಿದೆ, ಈ ಸಂಯುಕ್ತ ಸೇನೆಗೆ ಗುಜರಾತ್, ಬೀದರ್ನ ಸುಲ್ತಾನರ ಬಿಜಾಪುರದ ಆದಿಲ್ಶಾಹಿಗಳು ಹಾಗೂ ಕೇರಳದ ಜಾಮೋರಿನ್ ದೊರೆಗಳನ್ನು ಒಳಗೊಂಡಂತೆ ಹಲವು ರಾಜರು ಈ ಸಂಯುಕ್ತ ಸೇನೆಯಲ್ಲಿದ್ದರು ಎಂಬ ಉಲ್ಲೇಖವಿದೆ.
ಈ ಕರುನಾಡಿನ ಹೆಮ್ಮೆಯ ರಾಣಿಯ ಕುರಿತಾಗಿ ವಿದೇಶದಲ್ಲಿರುವ ಕೃತಿಗಳಲ್ಲಿ ಉಲ್ಲೇಖಗಳಿವೆ. ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಆಂಗ್ಲಭಾಷಾ ಪ್ರಾಧ್ಯಾಪಕಿ ಮತ್ತು ದಕ್ಷಿಣ ಏಷ್ಯಾ ಇನ್ಸ್ಟಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆಯಾಗಿರುವ ಹನ್ನಾಚಾಪೆಲ್ಲೆ ವೋಜಿಹೋಸ್ಕಿ ತಮ್ಮ ಪ್ರಬಂಧಗಳಲ್ಲಿ ರಾಣಿ ಚೆನ್ನಭೈರಾದೇವಿಯ ಸಾಹಸಗಳನ್ನು ಉಲ್ಲೇಖಿಸಿದ್ದಾರೆ. "ರಾಣಿ ಚೆನ್ನಭೈರಾದೇವಿಯೂ ಇಂಗ್ಲೆಂಡ್ ರಾಣಿ ಎಲಿಜಬೆತ್ರ ಸಮಕಾಲೀನರು ಮತ್ತು ಅನೇಕ ವಿಚಾರಗಳಲ್ಲಿ ರಾಣಿ ಎಲಿಜಬೆತ್ಗೂ ಮಿಗಿಲಾದವರು, ತನ್ನ ಚಾಣಾಕ್ಷತನದ ಮೈತ್ರಿಗಳು ಮತ್ತು ತನ್ನ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮೇಲುಗೈಯನ್ನ ಬಿಟ್ಟುಕೊಡದೇ ಸಮರ್ಥವಾಗಿ ಆಳ್ವಿಕೆ ನಡೆಸಿದ್ದಳು" ಎಂದು ಬರೆದಿದ್ದಾರೆ. ಇಷ್ಟು ಮಾತ್ರವಲ್ಲದೇ 1623ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಪ್ರವಾಸಿಗ ಪೀಟ್ರೋ ಡೆಲ್ಲಾವಿಲ್ಲೆ ಚೆನ್ನಭೈರಾದೇವಿಯ ಕಥೆಗಳನ್ನು ತನ್ನ ಸಾಹಸ ಕಥನಗಳಲ್ಲಿ ದಾಖಲಿಸುತ್ತಾನೆ.
ಯುದ್ಧದಲ್ಲಿ ರಾಣಿ ಚೆನ್ನಭೈರಾದೇವಿಯನ್ನು ಮೋಸದಲ್ಲಿ ಸೆರೆಹಿಡಿದ ಕೆಳದಿ ನಾಯಕ ವೆಂಕಟಪ್ಪನಾಯಕ ಆಕೆಯನ್ನ ಸಾವಿನವರೆಗೂ ನಗಿರೆಯ ಸೆರೆಮನೆಯಲ್ಲಿ ಹಿಡಿದಿಟ್ಟಿದ್ದ ಮತ್ತು ತನಗೆ ಸಹಾಯ ಮಾಡಿದ ಗೊಂಡನಾಯಕನನ್ನು ವೆಂಕಟಪ್ಪನಾಯಕ ಕೊಲ್ಲಿಸಿದ ಎಂದು ಇತಿಹಾಸಕಾರ, ಲೇಖಕ, ಡಾ | ಗಜಾನನ ಶರ್ಮ ತಮ್ಮ ಪುಸ್ತಕ ಚೆನ್ನಭೈರಾದೇವಿಯಲ್ಲಿ ಉಲ್ಲೇಖಿಸುತ್ತಾರೆ. ಅದೇನೆ ಇರಲಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ರಾಣಿ ಚೆನ್ನಭೈರಾದೇವಿಯ ಬಗ್ಗೆ ನಮ್ಮಲ್ಲೇ ಅನೇಕರಿಗೆ ತಿಳಿಯದಿರುವುದು ವಿಪರ್ಯಾಸವೇ ಸರಿ.!!! ಆಕೆ ಕಟ್ಟಿಸಿದ ಕಾನೂರಿನ ಕೋಟೆ ಇಂದಿಗೂ ಪಾಳುಬಿದ್ದು ನಿಧಿಯ ಆಸೆಗೆ ನಿಧಿ ಚೋರರ ಅತಿಯಾಸೆಗೆ ಹಾಳಾಗಿ ಹೋಗಿದೆ. ಮತ್ತು ಅಲ್ಲಿನ ವಿಗ್ರಹಗಳೆಲ್ಲವೂ ಅಳಿವಿನ ಅಂಚಿಗೆ ಹೋಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ.